ಮಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗಾಗಿ ಚಾಮರ ಫೌಂಡೇಶನ್ ವತಿಯಿಂದ ಉಚಿತ ಬೇಸಿಗೆ ಶಿಬಿರ

ಮಂಗಳೂರು: ದಿ.ಯತೀಶ್ ವೈ ಶೆಟ್ಟಿ ನೆನಪಿನಲ್ಲಿ ಚಾಮರ ಫೌಂಡೇಶನ್(ರಿ) ನಡೆಸುವ ಆರು ದಿನಗಳ ಉಚಿತ ಬೇಸಿಗೆ ಶಿಬಿರ ಬೇಸಿಗೆಗೊಂದು ಚಾಮರ 2023 ಬೈಕಂಪಾಡಿಯ ಮೊಗವೀರ ಸಮುದಾಯ ಭವನದಲ್ಲಿ ಎಪ್ರಿಲ್ 11 ರಂದು ಆರಂಭಗೊಂಡಿತು.

ಸರಳವಾಗಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಶಿಬಿರದ ಮಕ್ಕಳೇ ದೀಪ ಬೆಳಗುವುದರ ಮೂಲಕ ಆರಂಭಿಸಿದರು.

ಮಿಥುನ್ ಶ್ರಿಯಂ, ರಾಜೀವ ಕಾಂಚನ್, ಶಿರಿಶ್ ಕುಮಾರ್ ಹಾಗು ರಚನಾ ಉಪಸ್ಥಿತರಿದ್ದರು.

ಸುಮಾರು 130 ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದ ಭಾಗವಹಿಸಿದ್ದು, ಈ ಬೇಸಿಗೆ ಶಿಬಿರವನ್ನು ವಿಶೇಷವಾಗಿ ಸುತ್ತಮುತ್ತಲಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತವಾಗಿ ನಡೆಸಲಾಗುತ್ತದೆ. ಸಾಮಾನ್ಯವಾಗಿ ಇಂತಹ ಶಿಬಿರದಿಂದ ವಂಚಿತರಾಗುವ ಮಕ್ಕಳಿಗಾಗಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಹಾಗೂ ಮಕ್ಕಳಲ್ಲಿರುವ ಪ್ರತಿಭೆಯನ್ನು ತೋರ್ಪಡಿಸಲು ವೇದಿಕೆಯಾಗುವ ನಿಟ್ಟಿನಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಚಾಮರ ಫೌಂಡೇಶನ್ 03 ವರ್ಷಗಳಿಂದ ಇಂತಹ ಬೇಸಿಗೆ ಶಿಬಿರಗಳನ್ನು ಉಚಿತವಾಗಿ ನಡೆಸುತ್ತಿದೆ. ಮುಂದಿನ 5 ದಿನದಲ್ಲಿ ಮೈಮ್ ರಾಮದಾಸ್, ನವೀನ್ ಪಿಲಾರ್, ವಿಸ್ಮಯ ವಿನಾಯಕ್, ಛಾಯಾ, ಅರವಿಂದ್, ಮಿಥುನ್ ಶ್ರೀಯಾನ್ ಮುಂತಾದ ಮಂಗಳೂರು ಮತ್ತು ಉಡುಪಿಯ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ಯೋಗ, ಮೈಮ್, ಕೋಲಾಜ್, ಬಾಟಲ್ ಆರ್ಟ್, ವರ್ಲಿ ಆರ್ಟ್ ಮುಂತಾದ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುವುದು. ಶಿಬಿರದ ಸಮಾರೋಪ ಸಮಾರಂಭವು ಏಪ್ರಿಲ್ 16, ಆದಿತ್ಯವಾರದಂದು ಬೆಳಿಗ್ಗೆ 11:30 ಕ್ಕೆ ನಡೆಯಲಿರುವುದು.