ಕಾಂಗ್ರೆಸ್ ಕಾರ್ಯಕರ್ತನಿಂದ ಪಾಕ್ ಪರ ಪೋಸ್ಟ್ ಪ್ರಕರಣ: ಪೊಲೀಸರ ಪರ ಬೀದಿಗಿಳಿದು ಹೋರಾಡಲು ಸಿದ್ಧ; ಯಶ್ ಪಾಲ್ ಸುವರ್ಣ ಎಚ್ಚರಿಕೆ

ಉಡುಪಿ: ಭಾರತೀಯ ಯೋಧರ ಸಾವನ್ನು ಬಯಸಿ ಪಾಕಿಸ್ತಾನಿ ಸೈನಿಕರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ದೇಶದ್ರೋಹಿಯನ್ನು ಕಾಂಗ್ರೆಸ್ ತನ್ನ ಕಾರ್ಯಕರ್ತ ಎಂದು ಸಮರ್ಥಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ವಿಷಾದ ವ್ಯಕ್ತಪಡಿಸಿದ್ದಾರೆ.

ಕಾರ್ಕಳದ ಹಿರ್ಗಾನ ನಿವಾಸಿ ರಾಧಾಕೃಷ್ಣ ಎಂಬಾತ ಕೆಲತಿಂಗಳ ಹಿಂದೆ ಭಾರತೀಯ ಸೇನೆಯ ವಿರುದ್ಧ ಅಪಮಾನಕಾರಿ ಬರಹವನ್ನು ಬರೆದು ತಲೆಮರೆಸಿಕೊಂಡಿದ್ದ. ಮೊನ್ನೆ ಆತನನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದ್ದಾರೆ. ದೇಶ ಕಾಯುವ ಸೈನಿಕರ ಸಾವನ್ನು ಬಯಸುವ ಇಂತಹ ಹೀನ ಮನಸ್ಥಿತಿಯ ವ್ಯಕ್ತಿಯನ್ನು ವಿಚಾರಣೆ ಮಾಡದೆ ಮತ್ತೇನು ಠಾಣೆಯಲ್ಲಿ ಕೂರಿಸಿ ಮಂಗಳಾರತಿ ಮಾಡಬೇಕಿತ್ತೆ?. ಈತನಿಗೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾದ ಸಂಗತಿ. ವಿಚಾರಣೆ ಮುಗಿದ ಬಳಿಕ ನೆಟ್ಟಗೆ ನಡೆದುಕೊಂಡು ಮನೆಗೆ ಹೋದವನನ್ನು ಕಾಂಗ್ರೆಸ್ ನಾಯಕರೇ ಆಸ್ಪತ್ರೆಗೆ ಸೇರಿಸಿ ಪೋಲೀಸರ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಇಂತಹ ವಿಕೃತ ವ್ಯಕ್ತಿಯ ಸಮರ್ಥನೆಗೆ ಸಿದ್ದರಾಮಯ್ಯ ಮೊದಲಾದ ಹಿಂದೂ ವಿರೋಧಿ ದೇಶವಿರೋಧಿ ರಾಜಕಾರಣಿಗಳು ಮುಂದಾಗಿದ್ದು, ಇದರಲ್ಲಿ ಯಾವುದೇ ಅಚ್ಚರಿ ಇಲ್ಲ.  ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಎ ವಿರೋಧಿ ದಂಗೆಕೋರರಿಗೂ ಡಿಜೆ ಹಳ್ಳಿಯ ದುಷ್ಕರ್ಮಿಗಳಿಗೂ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಸಿದ್ದರಾಮಯ್ಯನ ಈ ಚಟುವಟಿಕೆಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಕಾರ್ಕಳ ನಗರ ಠಾಣಾ ಪೊಲೀಸ್ ಅಧಿಕಾರಿ ಅವರಿಗೆ ಸಂವಿಧಾನ ವ್ಯವಸ್ಥೆಯ ಮೇಲೆ ನಂಬಿಕೆ ಇರುವ ಪ್ರತಿಯೊಬ್ಬ ನಾಗರಿಕರ ಬೆಂಬಲವಿದೆ. ವಿನಾ ಕಾರಣ ಪೊಲೀಸ್ ಅಧಿಕಾರಿಗಳ ತೇಜೋವಧೆಗೆ ಮುಂದಾದರೆ ಕಾಂಗ್ರೆಸ್ ಪುಡಾರಿಗಳಿಗೆ ಇದು ದುಬಾರಿಯಾಗುವ ಸಾಧ್ಯತೆ ಇದೆ. ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸುವ ಕಾಂಗ್ರೆಸಿಗರ ವಿರುದ್ದ ಬೀದಿಗಿಳಿದು ಪ್ರತಿಭಟಿಸಲು ಸಿದ್ಧ ಎಂದು ಯಶ್ ಪಾಲ್ ಸುವರ್ಣ ಅವರು ಎಚ್ಚರಿಕೆ ನೀಡಿದ್ದಾರೆ.