ಕಾರ್ಕಳ: ಕ್ರಶರ್ ಮಾಲೀಕನಿಗೆ ಬೆದರಿಕೆಯೊಡ್ಡಿದ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು

ಉಡುಪಿ: ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು ಎಂಬಾತ ಬೆಳ್ಮಣ್ ಪರಿಸರದ ಕ್ವಾರೇ ಮಾಲೀಕರೊಬ್ಬರಿಗೆ ₹10 ಲಕ್ಷ ನೀಡುವಂತೆ ಬೆದರಿಕೆಯೊಡ್ಡಿದ ಘಟನೆ ಕಾರ್ಕಳದಲ್ಲಿ ಇಂದು ನಡೆದಿದೆ.

ಈ ಸಂಬಂಧ ಶ್ರೀದುರ್ಗಾ ಕ್ರಶರ್‌ನ ಮಾಲೀಕ ಬೆಳ್ಮಣ್ ಪೇರಲ್‌ಪಾದೆಯ ನಿತ್ಯಾನಂದ ಶೆಟ್ಟಿ ಕಾರ್ಕಳ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ರವಿ ಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದಾರೆ.

ರವಿ ಶೆಟ್ಟಿ ಸೆ. 10ರಂದು ನನ್ನ ಮೊಬೈಲ್‌ಗೆ ಕರೆ ಮಾಡಿ, ನಾನು ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಎಂದು ಪರಿಚಯ ಮಾಡಿಕೊಂಡಿದ್ದನು. ಆ ಬಳಿಕ ಅಕ್ಟೋಬರ್ 26 ರಂದು ನಾನು ಬೆಳ್ಮಣ್ ಪೆಟ್ರೋಲ್ ಬಂಕ್ ಬಳಿಯಲ್ಲಿ ಇದ್ದಾಗ ಇನೋವಾ ಕಾರಿನಲ್ಲಿ ರವಿಶೆಟ್ಟಿ ಅಲ್ಲಿಗೆ ಬಂದಿದ್ದನು. ನಿಮ್ಮ ಹಾಗೂ ನಿಮ್ಮ ಪಕ್ಕದಲ್ಲಿರುವ ಜೆ.ಎಲ್ ಕ್ರಶರ್‌ನ ಮಾಲೀಕ ಲ್ಯಾನ್ಸಿ ಡಿಕೋಸ್ತಾ ಒಟ್ಟು ಸೇರಿ ಹತ್ತು ಲಕ್ಷ ಮೊತ್ತವನ್ನು ತನಗೆ ನೀಡಬೇಕು. ಇಲ್ಲದಿದ್ದರೆ ನಿಮ್ಮ ಕ್ರಶರನ್ನು ಮುಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನು ಎಂದು ನಿತ್ಯಾನಂದ ದೂರಿನಲ್ಲಿ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ನನ್ನ ಕ್ರಶರ್ ಬಳಿ ಮೂವರು ಗಂಡಸರು ಹಾಗೂ ಓರ್ವ ಮಹಿಳೆ ಕಾರಿನಲ್ಲಿ ಆಗಮಿಸಿ, ಕ್ರಶರ್‌ನ ಹಾಗೂ ಪಾದೆಯ ಫೋಟೋ ತೆಗೆಯುತ್ತಿರುವ ವಿಷಯ ತಿಳಿಯಿತು. ಸ್ಥಳಕ್ಕೆ ಹೋಗಿ ನೋಡಿದಾಗ ರವಿ ಶೆಟ್ಟಿ ಹಾಗೂ ಆತನ ಸಹಚರರು ಯಾವುದೋ ದುರುದ್ದೇಶ ಪೂರಕವಾಗಿ ಈ ಕೃತ್ಯ ನಡೆಸುತ್ತಿದ್ದು, ಅವರಲ್ಲಿ ವಿಚಾರಿಸಿದಾಗಿ ಐದು ಲಕ್ಷ ಬೇಡಿಕೆ ಮುಂದಿಟ್ಟಿದ್ದಾರೆ. ಇಲ್ಲವಾದರೆ ಕ್ರಶರ್‌ರನ್ನು ಮುಚ್ಚಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿಸಿದ್ದಾರೆ.