ಕೋಲುಮಂಡೆ ಹಾಡನ್ನು ಯೂಟ್ಯೂಬ್ ನಿಂದ ಡಿಲೀಟ್ ಮಾಡಿ, ಕ್ಷಮೆಯಾಚಿಸಿದ ರ‍್ಯಾಪ್ ಸಿಂಗರ್ ಚಂದನ್‌ ಶೆಟ್ಟಿ

ಬೆಂಗಳೂರು: ರ‍್ಯಾಪ್ ಸಿಂಗರ್ ಚಂದನ್‌ ಶೆಟ್ಟಿ ಬಿಡುಗಡೆ ಮಾಡಿದ್ದ ‘ಕೋಲುಮಂಡೆ’ ರ‍್ಯಾಪ್ ಸಾಂಗ್ ಈಗ ವಿವಾದಕ್ಕೆ ಕಾರಣವಾಗಿದೆ.

ಮೂರು ದಿನಗಳ ಹಿಂದೆ ಆನಂದ್‌ ಆಡಿಯೋ ಕಂಪೆನಿಯ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡನ್ನು ಚಂದನ್‌ ಶೆಟ್ಟಿ ಬಿಡುಗಡೆ ಮಾಡಿದ್ದರು.

ಈ ಹಾಡಿನಲ್ಲಿ ಶಿವಶರಣೆ ಸಂಕಮ್ಮ ಅವರಿಗೆ ಅವಮಾನ ಮಾಡಲಾಗಿದೆ. ಭಕ್ತಿಗೀತೆಯನ್ನು ತಿರುಚುವ ಮೂಲಕ ಮಾದಪ್ಪನ ಭಕ್ತರ ಮನಸ್ಸಿಗೆ ನೋವುಂಟು ಮಾಡಲಾಗಿದೆ ಎಂದು ಫೇಸ್‌ಬುಕ್‌ನ ಶ್ರೀಮಲೆಮಹದೇಶ್ವರ ಸ್ವಾಮಿ ಗ್ರೂಪ್‌ನಲ್ಲಿ ಚಾಮರಾಜನಗರ ಜಿಲ್ಲೆಯ ಹಲವು ಯುವಕರು ಚಂದನ್ ವಿರುದ್ಧ ಆಕ್ರೋಶ ಮೊಳಗಿಸಿದ್ದಾರೆ.

ಕ್ಷಮೆಯಾಚಿಸಿದ ಚಂದನ್‌ ಶೆಟ್ಟಿ
ಕನ್ನಡ ಟಿವಿ ಮಾಧ್ಯಮಗಳಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ಭುಗಿಲೆಲುತ್ತಿದ್ದಂತೆ ಅವರು, ಮಲೆಮಹಹೇಶ್ವರ ಸ್ವಾಮಿಯ ಭಕ್ತರ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಯೂಟ್ಯೂಬ್ ನಿಂದ ಹಾಡನ್ನು ಡಿಲೀಟ್ ಮಾಡುತ್ತೇವೆಂದು ಹೇಳಿದ್ದಾರೆ.
ಮಲೆಮಹಹೇಶ್ವರ ಸ್ವಾಮಿಯ ಭಕ್ತರಿಗೆ ಅವಮಾನ ಮಾಡುವ ಉದ್ದೇಶ ನನಗಿಲ್ಲ. ಆಗಿರುವ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಚಂದನ್‌ ಹೇಳಿದ್ದಾರೆ.

ಯೂಟ್ಯೂಬ್ ನಿಂದ ಹಾಡು ಡಿಲೀಟ್:
ಕೋಲುಮಂಡೆ ಆಲ್ಬಂ ಹಾಡು ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡು‌ ಆನಂದ ಆಡಿಯೋ ಹಾಡನ್ನು ಯೂಟ್ಯೂಬ್ ನಿಂದ ಡಿಲೀಟ್ ಮಾಡಿದೆ.