ರಾಜ್ಯ ಸರಕಾರದ ರೈತಸಿರಿ ಯೋಜನೆಯಿಂದ ಕೃಷಿಕರಿಗೆ ಏನೆಲ್ಲಾ ಲಾಭವಿದೆ? ಈ ಮಾಹಿತಿ ನಿಮಗೆ ಗೊತ್ತಿರಲಿ!

ಏನಿದು ರೈತ ಸಿರಿ ಯೋಜನೆ

ಪೌಷ್ಟಿಕ ಆಹಾರ, ರೈತರಿಗೆ ಭದ್ರತೆ, ಸುಸ್ಥಿರ ಕೃಷಿ ಮತ್ತು ಪರಿಸರ ಸಂರಕ್ಷಣೆ ಪೂರಕವಾಗಿರುವ ಸಿರಿಧಾನ್ಯಗಳ ಬೆಳೆಯನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಯೋಜನೆಯೇ ರೈತಸಿರಿ ಯೋಜನೆ. 2019-20 ರ ಮುಂಗಡಪತ್ರದಲ್ಲಿ ಪ್ರಕಟಪಡಿಸಲಾಯಿತು. ಈ ಯೋಜನೆಯನ್ನು ಪ್ರಾರಂಭಿಸುವ ಮೂಲಕ ರಾಜ್ಯದ  ಕೃಷಿಯನ್ನು ಕೃಷಿ ವಲಯವನ್ನು ಉನ್ನತೀಕರಿಸಲಾಗುತ್ತದೆ. ಈ ಯೋಜನೆಯನ್ನು 2020-21 ರಿಂದ ಜಾರಿಗೊಳಿಸಲಾಗಿದೆ. 2024-25ರ ಸಾಲಿನಲ್ಲಿ ರೈತ ಸಿರಿ ಯೋಜನೆಯ ಅನುಷ್ಠಾನಕ್ಕಾಗಿ 550 ಲಕ್ಷ ಅನುದಾನವನ್ನು ಒದಗಿಸಲಾಗಿದ್ದು ಈ ಅನುದಾನದಲ್ಲಿ 23-24 ಸಾಲಿನಲ್ಲಿ ಬಾಕಿ ಇರುವ ರೈತರಿಗೆ ಪ್ರೋತ್ಸಾಹ ಧನ ನೀಡಲು ಆದ್ಯತೆಯನ್ನು ನೀಡಲಾಗುತ್ತಿದೆ.

ಸಿರಿಧಾನ್ಯಗಳ ಪ್ರಾಮುಖ್ಯತೆ

ಸಿರಿಧಾನ್ಯಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು  ಪೌಷ್ಟಿಕಾಂಶ ಭರಿತವಾಗಿವೆ. ಅವುಗಳನ್ನು ಸೇವಿಸುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಮತ್ತು ದೇಹವನ್ನು ಸದೃಢವಾಗಿಸಬಹುದು. ಸಿರಿಧಾನ್ಯಗಳನ್ನು ಪ್ರೋಟೀನ್ ಫೈಬರ್ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿವೆ.

* ಸಿರಿಧಾನ್ಯಗಳು ಮಧುಮೇಹ, ಹೃದಯ ಸಂಬAಧಿ ರೋಗಗಳು, ಬೊಜ್ಜು ಮತ್ತು ಇತರ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ. ಸಿರಿಧಾನ್ಯಗಳಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ರೋಗಗಳು ಹರಡುವುದನ್ನು ತಡೆಯಬಹುದು.

*  ಸಿರಿಧಾನ್ಯಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡಲು ಸಹಾಯ ಮಾಡಬಹುದು. ಇದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಿರಿಧಾನ್ಯಗಳು ಬರ-ನಿರೋಧಕ ಬೆಳೆಗಳಾಗಿವೆ. ಆದ್ದರಿಂದ ಕಡಿಮೆ ನೀರಿನಲ್ಲಿ ಬೆಳೆಯಲು ರೈತರಿಗೆ ಸಹಾಯಕವಾಗಿದೆ

ರೈತಸಿರಿ ಯೋಜನೆಯ ಉದ್ದೇಶಗಳು

ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶ ವಿಸ್ತರಣೆ ಮತ್ತು ಉತ್ಪಾದನೆ ಹೆಚ್ಚಿಸುವುದು. ಸಿರಿಧಾನ್ಯಗಳು ಪೌಷ್ಟಿಕ ಆಹಾರ. ರೈತರ ಭದ್ರತೆ, ಸುಸ್ಥಿರ ಕೃಷಿ ಮತ್ತು ಪರಿಸರ ಸಂರಕ್ಷಣೆಗೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸುವುದಾಗಿದೆ.  ಅತಿ ಕಡಿಮೆ ಬೆಳೆ ಜಮೀನ್ ಫಲವತ್ತತೆಯುಳ್ಳ ಜಮೀನಿನ ಸದ್ಬಳಕೆ ಮಾಡುವುದು. ಸಿರಿಧಾನ್ಯ ಉತ್ಪಾದಕತೆಗೆ ಪೂರಕವಾದ ತಾಂತ್ರಿಕತೆಗಳನ್ನು ಸೂಕ್ತ ಸಮಯದಲ್ಲಿ ಅಳವಡಿಸಿ ರೈತರ ಆರ್ಥಿಕ ಪರಿಸ್ಥಿಯನ್ನು ಸುಧಾರಿಸುವುದು. ಶೂನ್ಯ ಬಂಡವಾಳ ಯೋಜನೆ ಹಾಗೂ ಸಾವಯವ ಕೃಷಿಗೆ  ಪೂರಕವಾಗಿರುವ ಸಿರಿಧಾನ್ಯಗಳ ಉತ್ಪಾದನೆಯನ್ನು ಉತ್ತೇಸುವುದು. ರೈತರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಿ  ಮಾರುಕಟ್ಟೆ ಸಂಪರ್ಕ ಹೆಚ್ಚಿಸಿ ಕೃಷಿ ಮತ್ತು ಆಹಾರದ ಮುಖ್ಯ ವಾಹಿನಿಗೆ ಸಿರಿಧಾನ್ಯಗಳನ್ನು ತರುವುದು. ರಾಗಿ, ಜೋಳ ಮತ್ತು ಸಜ್ಜೆಯನ್ನು ಹೊರತುಪಡಿಸಿ ಊದಲು, ನವಣೆ, ಹಾರಕ ಸಾಮೆ ಮತ್ತು ಬರಗು ಸಿರಿಧಾನಗಯಗಳಿಗೆ ಆದ್ಯತೆಯನ್ನು ನೀಡಲಾಗುವುದು. ಈ ಯೋಜನೆಯಡಿ ಚಯಾ, ಕ್ವಿನೋವಾ ಟಿಫ್ ನಂತಹ ಬೆಳೆಗಳನ್ನು ಸೇರಿಸಲಾಗಿದೆ

ರೈತರಿಗೆ ಲಭ್ಯವಾಗುವ ಸಹಾಯಧನ

ಪ್ರತಿ ಹೆಕ್ಟೇರಿಗೆ ರೂ.10,000 ಗಳಂತೆ ಗರಿಷ್ಠ ಎರಡು ಹೆಕ್ಟೇರಿಗಳಿಗೆ ಸಿರಿಧಾನ್ಯ ಬೆಳೆಗಾರರಿಗೆ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ರೈತರಿಗೆ ಎರಡು ಕಂತಿನಲ್ಲಿ ಈ ಸಹಾಯಧನ ನೀಡಲಾಗುತ್ತದೆ. ಮೊದಲ ಕಂತಿನ ಪ್ರೋತ್ಸಾಹ ಧನ 6,೦೦೦ರೂಪಾಯಿಗಳನ್ನು ಸಿರಿಧಾನ್ಯ ಬಿತ್ತನೆ ಮಾಡಿದ 30 ದಿನಗಳ ನಂತರ ಬೆಳೆಯ ಜಿಪಿಎಸ್ ಆಧಾರಿತ ಫೋಟೋ ಪರಿಶೀಲಿಸಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಎರಡನೇ ಕಂತಿನ ಪ್ರೋತ್ಸಾಹಧನ 4000ವನ್ನು ನಂತರದಲ್ಲಿ ಜಮೆ ಮಾಡಲಾಗುತ್ತದೆ. ಈ ಯೋಜನೆಯನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಇನ್ನಿತರ ಸಮಾನ ಯೋಜನೆಗಳೊಂದಿಗೆ ಸಂಯೋಜಿಸಿ ಅನುಷ್ಠಾನ ಮಾಡಲಾಗುತ್ತಿದೆ

ಫಲಾನುಭವಿಗಳ ಅರ್ಹತೆ : ಫಲಾನುಭವಿಯು ರೈತನಾಗಿದ್ದು ಅವನ/ಳ ಹೆಸರಿನಲ್ಲಿ ಜಮೀನು ಹೊಂದಿರಬೇಕು. ತಂದೆ ಅಥವಾ ತಾಯಿ ಹೆಸರಲ್ಲಿ ಜಮೀನಿದ್ದು ಅವರು ಹೊಂದಿದ್ದರಲ್ಲಿ  ಮಾತ್ರ ಲೆಕ್ಕಿಗರಿಂದ ದೃಢೀಕರಿಸಿ ಕುಟುಂಬದ ಇತರ ಸದಸ್ಯರಿಂದ ಒಪ್ಪಿಗೆ ಪಡೆದು ಅರ್ಜಿ ಸಲ್ಲಿಸಬೇಕು. ಮಹಿಳೆಯ ಹೆಸರಿನಲ್ಲಿ ಖಾತೆ ಇದ್ದರೆ ಮಹಿಳೆಯ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಬೇಕು. ರೈತರು ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೋರಲೆ, ಮತ್ತು ಬರಗು ಸಿರಿಧಾನ್ಯಗಳನ್ನು ಪ್ರಮುಖವಾಗಿ ಬೆಳೆದಿರಬೇಕು

ಬೇಕಾಗಿರುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ : ವಸತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಭೂ ದಾಖಲೆಗಳು, ವಿಳಾಸದ ಪುರಾವೆ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ಬುಕ್.ರೈತ ಸಿರಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು, ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು  ರೈತಮಿತ್ರ ( (raitamitra.karnataka.gov.in) ಗೆ ಭೇಟಿ ನೀಡಿ  ಅಗತ್ಯ ದಾಖಲಾತಿಯೊಂದಿಗೆ  ಸ್ಥಳೀಯ ಕೃಷಿ ಕಚೇರಿಗೆ ಸಲ್ಲಿಸಬಹುದು. ಮೊಬೈಲ್ ಅಥವಾ  ಅರ್ಜಿ ಸಂಖ್ಯೆಯನ್ನು ಬಳಸಿಕೊಂಡು ಆನ್ಲೈನ್ ನಲ್ಲಿ ಅರ್ಜಿ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ನವೀಕರಣಗಳನ್ನು ಪೋರ್ಟಲ್ ಅಥವಾ ಸಹಾಯವಾಣಿಯ ಮೂಲಕ ದೃಢೀಕರಿಸಬಹುದು.

ಸಿರಿಧಾನ್ಯ ಉತ್ಪನ್ನಗಳ ಸಂಸ್ಕರಣೆ ಘಟಕಕ್ಕೆ ಸಹಾಯಧನ

ರಾಜ್ಯದ ರೈತರು ಬೆಳೆದ ಸಿರಿಧಾನ್ಯವನ್ನು ಉತ್ತಮ ಬೆಲೆ ದೊರಕಿಸಿಕೊಡಲು ಸಿರಿಧಾನ್ಯಗಳ ಸಂರಕ್ಷಣೆಗೆ ಉತ್ತೇಜನ ನೀಡಲು ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳ ಸ್ಥಾಪನೆಗೆ ಯಂತ್ರೋಪಕರಣಗಳ ಒಟ್ಟು ವೆಚ್ಚದ ಮೇಲೆ ಶೇಕಡ 50ರಷ್ಟು ಅಥವಾ ಗರಿಷ್ಠ 10 ಲಕ್ಷ ರೂ ಸಹಾಯಧನವನ್ನು ಪಡೆಯಬಹುದು.  ಯೋಜನಾ ಪ್ರಸ್ತಾವನೆಯ ಒಟ್ಟು ಮೊತ್ತದ 5 ಲಕ್ಷ ರೂಗಳಿಂದ ಹೆಚ್ಚಾಗಿದ್ದಲ್ಲಿ ಅರ್ಜಿದಾರರು ಯಾವುದಾದರೊಂದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಕಡ್ಡಾಯವಾಗಿ ಸಾಲ ಪಡೆಯಬೇಕು.

ಇಂಥಹ ಸಂದರ್ಭದಲ್ಲಿ ಸರಕಾರದಿಂದ ಮಂಜೂರಾದ ನೆರವನ್ನು ಬ್ಯಾಂಕ್ ಸಾಲ ಆಧಾರಿತ ಸಹಾಯಧನವನ್ನಾಗಿ ಪರಿಗಣಿಸಲಾಗುತ್ತದೆ. ಯೋಜನಾ ಪ್ರಸ್ತಾವನೆಯ ಒಟ್ಟು ಮೊತ್ತ 5 ಲಕ್ಷ ರೂಗಳಿಂದ ಕಡಿಮೆ ಇದ್ದಲ್ಲಿ ನೆರವು ಕೋರುವ ಅರ್ಜಿದಾರರು ಘಟಕ ಸ್ಥಾಪನೆ ಉದ್ದೇಶಕ್ಕಾಗಿ ಸ್ವಂತ ಬಂಡವಾಳ ಹೂಡಿಕೆ ಮಾಡತಕ್ಕದ್ದು.  ಇಲ್ಲವೇ ಯಾವುದಾದರೂ ಒಂದು ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಘಟಕಗಳನ್ನು ಅಳವಡಿಸಬೇಕು. ಇಂತಹ ಪ್ರಸಂಗದಲ್ಲಿ ಸಹಾಯಧನವನ್ನು ಸಂಬಂಧಿಸಿದೆ ಫಲಾನುಭವಿ ಥವಾ ಅರ್ಜಿದಾರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಅಗತ್ಯ ದಾಖಲೆಗಳು : ನಿಗದಿತ ನಮೂನೆಯ ಅರ್ಜಿ, ಘಟಕ ಅನುಷ್ಠಾನ ನಿವೇಶನ ಅಥವಾ ಕಟ್ಟಡದ ದಾಖಲಾತಿ, ವಿವರವಾದ ಯೋಜನಾ ವರದಿ, ಸಂಘ ಸಂಸ್ಥೆಗಳಾಗಿದ್ದಲ್ಲಿ ನೋಂದಣಿ ಪ್ರಮಾಣ ಪತ್ರ ಹಾಗೂ ಸಂಘದ ಉಪನಿಯಮಗಳು ಇದ್ದಲ್ಲಿ  ಪಾಲುದಾರಿಕೆ ಪತ್ರ ಅಥವಾ ಇನ್ನಾವುದೇ ಎಮ್‌ಎಸ್‌ಎಮ್‌ಇಗಳ ಉದ್ಯೋಗ ಆಧಾರ್ ನೋಂದಣಿ ಪ್ರಮಾಣ ಪತ್ರ, ಕಟ್ಟಡದ ಹಾಲಿ ನಕಾಶೆ ಮತ್ತು ಕಾರ್ಯವಿಧಾನ ಗಳನ್ನು ಸೂಚಿಸುವ ರೇಖಾ ಚಿತ್ರ. ಸಂಬಂಧಿಸಿದೆ ಸ್ಥಳೀಯ ಸಂಸ್ಥೆಗಳ ಮೂಲಭೂತ ಘಟಕ ಸ್ಥಾಪನೆಗೆ ಪಡೆದ ಪರವಾನಿಗೆ ಪತ್ರ, ವಿದ್ಯುತ್ ಸರಬರಾಜಿಗೆ ಸಂಬಂಧಪಟ್ಟ ಮಂಜೂರಾತಿ ಪತ್ರ, ಯಂತ್ರೋಪಕರಣಗಳ ತಯಾರಕರು, ಮಾರುಕಟ್ಟೆದಾರರಿಂದ ಪಡೆದ ದರಪತ್ರ.

ಪಟ್ಟಿ, ಘಟಕ ಸ್ಥಾಪನೆಗೆ ಹಣಕಾಸು ಸಂಸ್ಥೆಯಿಂದ ಪಡೆದ ಸಾಲ ಮಂಜೂರಾತಿ ಪತ್ರ, ಯೋಜನೆಯಡಿ ಯಾವ ಘಟಕಗಳಿಗೆ ಸಹಾಯಧನವನ್ನು ಪಡೆಯಲಾಗುತ್ತಿದೆಯೋ ಆ ಘಟಕದಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಘಟಕದ ನಿರ್ವಹಣೆಯನ್ನು ಅಥವಾ ಉತ್ಪಾದನೆಯನ್ನು ಕೈಗೊಳ್ಳುವ ಬಗ್ಗೆ ಮುಚ್ಚಳಿಕೆ ಮತ್ತು ಸಾಧ್ಯವಾಗದಿದ್ದಲ್ಲಿ ಸರಕಾರಕ್ಕೆ ಸಹಾಯಧನವನ್ನು ಸರಳ ಬಡ್ಡಿದರದೊಂದಿಗೆ ಸರಕಾರ ಹಿಂತಿರುಗಿಸುವ ಬಗ್ಗೆ ಮುಚ್ಚಳಿಕೆ ಪತ್ರ, ಪ್ರಸ್ತಾವಿಕ ಘಟಕಗಳು ಅನುಷ್ಠಾನಕ್ಕೆ ಸಂಬಂಧಿಸಿದ ಇತರೆ ರಾಜ್ಯ ಮತ್ತು ಕೇಂದ್ರ ಸರಕಾರ ಇಲಾಖೆಗಳಿಂದ/ ಸರಕಾರಿ ಅರೆ ಸರ್ಕಾರಿ ಸಂಸ್ಥೆಗಳ ಯಾವುದೇ ರೀತಿಯ ನೆರವು ಪಡೆದಿರುವ  ಬಗ್ಗೆ ಮುಚ್ಚಳಿಕೆ ಪತ್ರ, ಪರಿಶಿಷ್ಟ ಜಾತಿ ಪಂಗಡ, ಫಲಾನುಭವಿಗಳಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಆಧಾರ ಹಾಗೂ ಪ್ಯಾನ್ ಕಾರ್ಡ್ ಪ್ರತಿ,  ಯಂತ್ರೋಪಕರಣಗಳ ಅಥವಾ ಯಂತ್ರೋಪಕರಣಗಳು ಅಥವಾ ಯಂತ್ರೋಪಕರಣಗಳ ಪ್ರಮುಖ ಘಟಕಗಳು ಐಎಸ್‌ಐ/ಬಿಐಎಸ್ ಮಾರ್ಕ್ ಹೊಂದಿರುವ ಬಗ್ಗೆ ದಾಖಲಾತಿ, ಸಂಪೂರ್ಣಗೊಂಡ ಪ್ರಸ್ತಾವನೆಗಳಿಗೆ ಛಾಯಾಚಿತ್ರಗಳೊಂದಿಗೆ ನಿಗದಿತ  ನಮೂನೆಯಲ್ಲಿ ಅನುಷ್ಠಾನಗೊಂಡ ಬಗ್ಗೆ ತಪಾಸಣಾ ವರದಿ,  ಅನುದಾನಿತ ಪ್ರಸ್ತಾವನೆಗಳಿಗೆ ಘಟಕದ ಅನುಷ್ಠಾನ ಪೂರ್ಣಗೊಂಡ ನಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು  ಘಟಕ ಪರಿಶೀಲನಾ ವರದಿಯನ್ವಯ ಸಹಾಯಧನವನ್ನು ಸಂಬಂಧಪಟ್ಟ ಜಿಲ್ಲೆಗೆ ಬಿಡುಗಡೆ ಮಾಡಲಾಗುತ್ತದೆ.

ರೈತರಿಗೆ ಯೋಜನೆಯಿಂದ ಸಿಗುವ ಪ್ರಯೋಜನಗಳು

ಪ್ರತಿ ಹೆಕ್ಟೇರಿಗೆ 10 ಸಾವಿರ ರೂಪಾಯಿಗಳ ಸಹಾಯಧನವನ್ನು ಬೆಳೆಗಾರರು ಪಡೆಯುತ್ತಾರೆ. ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಳದಿಂದ ರೈತರ ಆದಾಯ ಹೆಚ್ಚಳ. ಈ ಯೋಜನೆಯಿಂದ ಸಿರಿಧಾನ್ಯಗಳ ಬಳಕೆ ಮತ್ತು ಬೇಡಿಕೆ ಹೆಚ್ಚಿಸುತ್ತದೆ.  ಬೇಡಿಕೆ ಹೆಚ್ಚಿದಂತೆ ರೈತರಿಗೆ ಮಾರುಕಟ್ಟೆ ಸಂಪರ್ಕ ಹೆಚ್ಚಾಗುತ್ತದೆ.

ಕಡಿಮೆ ನೀರಿನಲ್ಲಿ ಬೆಳೆಯುವ ಸಿರಿಧಾನ್ಯಗಳನ್ನು ಉತ್ತೇಜಿಸುವುದರಿಂದ ನೀರಿನ ಸಂರಕ್ಷಣೆ ಸಾಧ್ಯ. ಸಿರಿಧಾನ್ಯಗಳು ಪೌಷ್ಟಿಕಾಂಶ ಭರಿತವಾಗಿದ್ದು ಗ್ರಾಹಕರ ಆರೋಗ್ಯಕ್ಕೆ ಕಾರಣವಾಗುತ್ತದೆ. ಸಿರಿಧಾನ್ಯಗಳು ಕೃಷಿಯಿಂದ ಸುಸ್ಥಿರ ಕೃಷಿಗೆ ಪ್ರೋತ್ಸಾಹ ಸಿಗುತ್ತದೆ. ಸಿರಿಧಾನ್ಯಗಳ ಕೃಷಿಯಿಂದ ಪರಿಸರ ಸಂರಕ್ಷಣೆಗೆ ಸಹಾಯಕವಾಗುತ್ತದೆ. ಕಡಿಮೆ ಫಲವತ್ತೆಯ ಭೂಮಿಯ ಸದ್ಬಳಕೆ ಆಗುತ್ತದೆ. ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ಹೆಚ್ಚುತ್ತದೆ. ಕಡಿಮೆ ನೀರು ಮತ್ತು ಕ್ರಿಮಿನಾಶಕಗಳ ಬಳಕೆಯಿಂದ ಉತ್ಪಪಾದನಾ ವೆಚ್ಚ ಕಡಿಮೆಯಾಗುತ್ತದೆ.

ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ

ಸಿರಿಧಾನ್ಯ ಉತ್ಪನ್ನಗಳ ತಾಲೂಕು ಜಿಲ್ಲೆ ರಾಜ್ಯ ಅಥವಾ ಅಂತರ್ ರಾಜ್ಯ ಮಟ್ಟದಲ್ಲಿ ಕಾರ್ಯಾಗಾರ ಮೇಳ, ವಸ್ತು ಪ್ರದರ್ಶನ ಇನ್ನಿತರ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದೆ. ಸಾವಯುವ ಹಾಗೂ ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ 2025 ರ ಜನವರಿಯಲ್ಲಿ ನಡೆದ ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳದಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಮೇಳದಲ್ಲಿ ನಡೆದ 213 ಉತ್ಪಾದಕರು ಮಾರುಕಟ್ಟೆದಾರರ ಸಭೆಗಳಲ್ಲಿ 150 ಕೋಟಿ ರೂ ಮೌಲ್ಯ 41 ಒಡಂಬಡಿಕೆಗಳಾಗಿವೆ. ಕಳೆದ ಜನವರಿಯಲ್ಲಿ  ಇಂಡಿಯನ್ ಟ್ರೇಡಿಂಗ್ ಫುಡ್ಸ್ ಮೇಳದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು 185.42 ಕೋಟಿ ರೂಗಳ 6೦ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳು ಉತ್ಪಾದನೆ ಹಾಗೂ ಬಳಕೆ ಹೆಚ್ಚಾಗುತ್ತಿದ್ದು ರೈತರು ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಜಾರಿಗೆ ತಂದಿರುವ ರೈತ ಸಿರಿ ಯೋಜನೆಯು  ಹೆಚ್ಚಾಗಿ ಸಣ್ಣ ಮತ್ತು ಅತೀ ಸಣ್ಣ ರೈತರ ಪಾಲಿಗೆ  ಕಾಮಧೇನುವಾಗಿದೆ.  ಪೌಷ್ಟಿಕಾಂಶ ಭರಿತವಾದ ಗ್ರಾಹಕರ ಆರೋಗ್ಯಕರ ಜೀವನ ಶೈಲಿಗೆ ಸಹಕಾರಿಯಾಗಿದೆ. ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳ ಸ್ಥಾಪನೆಗೆ ರಾಜ್ಯ ಸರಕಾರ ಅನುದಾನ ನೀಡುತ್ತಿರುವುದರಿಂದ  ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೂ ಸಹಕಾರಿ. ಇದರಿಂದ  ರೈತರಿಗೂ, ದೇಶಕ್ಕೂ ಆದಾಯ ಮತ್ತು  ಗ್ರಾಹಕರಿಗೂ ಆರೋಗ್ಯ ಭಾಗ್ಯ ಕಲ್ಪಿಸುವ ಸಿರಿಧಾನ್ಯವು ಅಥವಾ ಕಿರು ಧಾನ್ಯಗಳು ರೈತರ ಪಾಲಿನ ಸಿರಿ ತರುವ ಭಾಗ್ಯದ ಹಿರಿಮೆಯನ್ನು ಹೊಂದಿವೆ.