ಕಲ್ಲಪದವು: ಪತ್ನಿಯನ್ನು ಚೂರಿಯಿಂದ ಇರಿದು ಕೊಂದ‌ ‌ಪತಿ !

ಮಂಗಳೂರು: ಪತಿರಾಯನೋರ್ವ ಪತ್ನಿಯನ್ನು ಚೂರಿಯಿಂದ ಇರಿದ ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಲ್ಲಪದವು ಎಂಬಲ್ಲಿ ಸಂಭವಿಸಿದೆ.
ಕೊಲೆಗೈದ ಆರೋಪಿ ಪತಿ ಗಣೇಶ್ ಎಂಬಾತನನ್ನು ಬಂಧಿಸಲಾಗಿದೆ. ಗಣೇಶ್ ತನ್ನ ಪತ್ನಿ ಅಕ್ಷತಾ ಜತೆ ಜಗಳವಾಡಿ ಅನಂತರ ಮನೆಯಲ್ಲಿ ಇದ್ದ ಚೂರಿಯಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಅಕ್ಷತಾ ಹತ್ತಿರದಲ್ಲಿ ಇದ್ದ ತನ್ನ ತಾಯಿ ಮನೆಗೆ ಓಡಿದ್ದಾಳೆ. ಆಗ ಹಿಂಬಾಲಿಸಿದ ಗಣೇಶ್ ಮತ್ತೆ ಇರಿಯಲು ಯತ್ನಿಸಿದಾಗ ಅಲ್ಲಿದ್ದವರು ಆತನನ್ನು ತಡೆದಿದ್ದಾರೆ.‌ ಈ ಸಂದರ್ಭ ಆತ ಸ್ಥಳದಿಂದ ಓಡಿದ್ದಾನೆ.
ಈ ಬಗ್ಗೆ ಅಕ್ಷತಾರಲ್ಲಿ ವಿಚಾರಿಸಿದಾಗ ತಾನು ಅಡುಗೆ ಸರಿಯಾಗಿ ಮಾಡಲಿಲ್ಲ ಎಂಬ ವಿಚಾರಕ್ಕೆ ಕೋಪಗೊಂಡು ಚೂರಿಯಿಂದ ಇರಿದಿರುವುದಾಗಿ ತಿಳಿಸಿದ್ದಾಳೆ.
ಕುತ್ತಿಗೆ, ಮುಖ ಮತ್ತಿತರ ಕಡೆ ಗಂಭೀರ ಗಾಯಗೊಂಡು ಕುಸಿದು ಬಿದ್ದ ಅಕ್ಷತಾರವರನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆ‌ ವೈದ್ಯರು ಪರೀಕ್ಷಿಸಿ ಅಕ್ಷತಾಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.