ಉಡುಪಿ: ಹಿರಿಯಡಕದ ಸ್ವರ್ಣ ನದಿಯ ತೀರದಲ್ಲಿರುವ ಶ್ರೀ ಪುತ್ತಿಗೆ ಮೂಲ ಮಠದಲ್ಲಿ ವಾರ್ಷಿಕ ಮಹಾಭಿಷೇಕವು ಶುಕ್ರವಾರ ನಡೆಯಿತು.ಇದರ ಅಂಗವಾಗಿ ಶ್ರೀ ರಾಮ, ನರಸಿಂಹ ದೇವರ ಸಹಿತ ಮಠದ ಸಂಸ್ಥಾನ ದೇವರಿಗೆ ವಿವಿಧ ಮಂಗಳ ದ್ರವ್ಯವನ್ನು ಒಳಗೊಂಡಂತೆ ಪಂಚಾಮೃತ ಅಭಿಷೇಕ ಹಾಗೂ ಸೀಯಾಳ ಅಭಿಷೇಕವನ್ನು ಮಾಡಲಾಯಿತು.ವಿಶೇಷ ಅಲಂಕಾರವನ್ನು ಮಾಡಿ ಮಹಾ ಪೂಜೆಯನ್ನು ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮನ್ಯುಸೂಕ್ತ ಹೋಮದ ಮಂಡಲ ಪೂಜೆ ಮಾಡಿ, ವಿವಿಧ ಮಂಗಳ ದ್ರವ್ಯಗಳನ್ನು ಅರ್ಪಿಸಿ ಹೋಮದ ಮಹಾಪೂಜೆ ಹಾಗೂ ಪೂರ್ಣಾಹುತಿಯನ್ನು ಮಾಡಲಾಯಿತು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಇವರ ನೇತೃತ್ವದಲ್ಲಿ ನಡೆದವು.













