ಪುಷ್ಪಾನಂದ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

ಉಡುಪಿ: ಮಂಗಳವಾರದಂದು ಅಲೆವೂರಿನ ಸಂಕಲ್ಪ ಸಭಾಭವನದಲ್ಲಿ ಪುಷ್ಪಾನಂದ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ಕಾಪು ಮಂಡಲದ ಅಧ್ಯಕ್ಷ ಶ್ರೀಕಾಂತ ನಾಯಕ್ ಅಲೆವೂರು, ಪುಷ್ಪಾನಂದ ಫೌಂಡೇಶನ್ ವತಿಯಿಂದ ಕಾಪು ಕ್ಷೇತ್ರದ 29 ಗ್ರಾಮಗಳ 2158 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ವಿತರಿಸುವ ಮೂಲಕ ಯಶ್‍ಪಾಲ್ ಸುವರ್ಣ ತಮ್ಮ ಸಾಮಾಜಿಕ ಬದ್ಧತೆಯನ್ನು ನಿರೂಪಿಸಿದ್ದಾರೆ. ಸಮಾಜ ಸೇವೆಯ ಸಂಕಲ್ಪದೊಂದಿಗೆ ಜಾತಿ ಮತ ಭೇದವಿಲ್ಲದೇ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುವ ಈ ಕಾರ್ಯ ಎಲ್ಲರಿಗೂ ಮಾದರಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುಷ್ಪಾನಂದ ಫೌಂಡೇಶನ್ ಸ್ಥಾಪಕ ಯಶ್‍ಪಾಲ್ ಸುವರ್ಣ ಮಾತನಾಡಿ, ತಂದೆ ತಾಯಿಯ ಪ್ರೇರಣೆಯಿಂದ ನಮ್ಮ ಫೌಂಡೇಶನ್ ಮೂಲಕ ಹತ್ತನೆ ತರಗತಿಯ 1456 ವಿದ್ಯಾರ್ಥಿಗಳಿಗೆ ಮತ್ತು ದ್ವಿತೀಯ ಪಿಯುಸಿಯ 702 ವಿದ್ಯಾರ್ಥಿಗಳಿಗೆ 23,35,500 ರೂ ಮೊತ್ತದ ಪ್ರತಿಭಾ ಪುರಸ್ಕಾರ ನೀಡಿ ಶಿಕ್ಷಣದಲ್ಲಿ ಅವರ ಮುಂದಿನ ಸಾಧನೆಗೆ ಸಹಕರಿಸಿದ ಸಂತೃಪ್ತಿ ಇದೆ. ನಮ್ಮ ಈ ಪ್ರತಿಭಾ ಪುರಸ್ಕಾರ ಯೋಜನೆಗೆ ಕಾಪು ಕ್ಷೇತ್ರದ ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿ ಸ್ಪಂದಿಸಿ ಅರ್ಜಿ ಸಲ್ಲಿಸಿದ್ದು ಪ್ರತಿಭಾವಂತ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಜೀವನದಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ವಿ4 ಡೆವಲಪರ್ಸ್ ನ ಆಡಳಿತ ನಿರ್ದೇಶಕ ಕಾರ್ತಿಕ್ ಶೆಟ್ಟಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಶ್ರೀಮತಿ ತಾರಾ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅಲೆವೂರು ಮತ್ತು ಮರ್ಣೆ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ 102 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕೊರಂಗ್ರಪಾಡಿ ಸಿ ಎ ಬ್ಯಾಂಕ್ ಅಧ್ಯಕ್ಷ ಶ್ರೀ ಹರೀಶ್ ಶೇರಿಗಾರ್, ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಮಂಜೇಶ್ ಕುಮಾರ್, ಉದ್ಯಾವರ ಅಲೆವೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಶೋಕ್ ಭಂಡಾರಿ, ಮರ್ಣೆ ಗ್ರಾಮ ಪಂಚಾಯತ್ ಸದಸ್ಯ ಪ್ರಜ್ವಲ್ ಹೆಗ್ಡೆ, ಪದ್ಮನಾಭ ನಾಯಕ್ ಉಪಸ್ಥಿತರಿದ್ದರು.

ಮಟ್ಟು ಯತೀಶ್ ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.