ಭೂ ಒಡೆತನ ಯೋಜನೆಯಡಿ ಜಮೀನು ಖರೀದಿ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ಅಧೀನಕ್ಕೊಳಪಟ್ಟಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿದ್ದು, ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಘಟಕ ವೆಚ್ಚ 15 ಲಕ್ಷ ರೂ. ಗಳಲ್ಲಿ ಲಭ್ಯವಾಗುವಷ್ಟು ಖುಷ್ಕಿ ಅಥವಾ ತರಿ ಅಥವಾ ಭಾಗಾಯ್ತು ಜಮೀನನ್ನು ಖರೀದಿಸಿಕೊಡಲಾಗುವುದು.

ಖರೀದಿಸಲು ಉದ್ದೇಶಿಸಿರುವ ಜಮೀನು ಕೃಷಿಗೆ ಯೋಗ್ಯವಾಗಿರಬೇಕು. ಹಾಲಿ ವ್ಯವಸಾಯಕ್ಕೆ ಒಳಪಟ್ಟಿರುವ ಜಮೀನಾಗಿರಬೇಕು. ಪಿ.ಟಿ.ಸಿ.ಎಲ್. ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಅರಣ್ಯ ಕಾಯ್ದೆ, ಲ್ಯಾಂಡ್ ಗ್ರಾಂಟ್ಸ್ ರೂಲ್ಸ್ ಉಲ್ಲಂಘನೆಯಾಗಿರಬಾರದು. ಯಾವುದೇ ವ್ಯಾಜ್ಯ ಇರಬಾರದು ಹಾಗೂ ಖರೀದಿಸುವ ಜಮೀನು ಫಲಾನುಭವಿಯ ವಾಸಿಸುವ ಸ್ಥಳದಿಂದ ಗರಿಷ್ಟ 10 ಕಿ.ಮೀ ವ್ಯಾಪ್ತಿಯಲ್ಲಿರಬೇಕು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ಹೊರತುಪಡಿಸಿ ಇತರೆ ಜಾತಿಗೆ ಸೇರಿದ ಭೂ ಮಾಲೀಕರು ತಮ್ಮ ಜಮೀನನ್ನು ಮೇಲಿನ ದರದಲ್ಲಿ ನಿಗಮಕ್ಕೆ ಮಾರಾಟ ಮಾಡಲು ಆಸಕ್ತಿ ಇದ್ದಲ್ಲಿ, ಪತ್ರದ ಮೂಲಕ ಅಥವಾ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ರಜತಾದ್ರಿ, ಮಣಿಪಾಲ, ದೂರವಾಣಿ ಸಂಖ್ಯೆ: 0820-2574884 ಅನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.