ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಿ: ಪ್ರಧಾನಿಗೆ ಮನವಿ ಮಾಡಿದ ಡಿಸಿಎಂ

ಬೆಂಗಳೂರು: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡಿರುವ ಯೋಜನೆಗಳ ಅಂದಾಜು ವೆಚ್ಚ ₹ 1.50 ಲಕ್ಷ ಕೋಟಿಯಾಗಿದ್ದು, ಕೇಂದ್ರ ಸರ್ಕಾರವು ಸಮರ್ಪಕ ಅನುದಾನವನ್ನು ಒದಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.ಸುರಂಗ ರಸ್ತೆ, ಆರ್ಟಿಲರಿ ರಸ್ತೆಗಳ ಬಳಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ಪೆರಿಫೆರಲ್ ವರ್ತುಲ ರಸ್ತೆ, ಘನತ್ಯಾಜ ವಿಲೇವಾರಿ ಸೇರಿದಂತೆ ಇತರೇ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

‘ಕರ್ನಾಟಕವು ವರ್ಷಕ್ಕೆ ಸುಮಾರು ₹4.50 ಲಕ್ಷ ಕೋಟಿ ತೆರಿಗೆ ಪಾವತಿಸುತ್ತಿದೆ. ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈಗಾಗಲೇ ಕರ್ನಾಟಕ ಸರ್ಕಾರವು ಯಶಸ್ವಿಯಾಗಿ ಮೆಟ್ರೊ ಮಾರ್ಗ ಹಾಗೂ ಡಬಲ್ ಡೆಕರ್ ಅನುಷ್ಠಾನಗೊಳಿಸಿದೆ. ಐದನೇ ಹಂತದ‌ ಕಾವೇರಿ ಕುಡಿಯುವ ನೀರು ಯೋಜನೆಯೂ ಯಶಸ್ವಿಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ಕುಡಿಯುವ ನೀರಿನ ಯೋಜನೆಗಳು, ರಾಜಕಾಲುವೆಗಳ ಪಕ್ಕದಲ್ಲಿ ನೂತನ ರಸ್ತೆಗಳ ನಿರ್ಮಾಣ ಇತ್ಯಾದಿ ಯೋಜನೆಗಳಿಂದ ಬೆಂಗಳೂರು ಇನ್ನಷ್ಟು ಪ್ರಮುಖ ನಗರವಾಗಿ ಅಭಿವೃದ್ಧಿಯಾಗಲಿದೆ’ ವಿವರಿಸಿದ್ದಾರೆ.

ಸುರಂಗ ರಸ್ತೆ ಹಾಗೂ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ₹ 41,780 ಕೋಟಿ, ಪ್ರಮುಖ ರಸ್ತೆಗಳ ಬಳಿ ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ₹ 15 ಸಾವಿರ ಕೋಟಿ, ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ₹ 27,000 ಕೋಟಿ, ಘನತ್ಯಾಜ್ಯ ವಿಲೇವಾರಿಗೆ ₹3,200 ಕೋಟಿ, ಡಬಲ್ ಡೆಕರ್‌ಗಳ ನಿರ್ಮಾಣಕ್ಕೆ ₹ 8,916 ಕೋಟಿ ವೆಚ್ಚವಾಗಲಿದೆ. ಮೆಟ್ರೊ ಹಂತ 2, 2ಎ, 3, 3ಎ ಯೋಜನೆಗಳ ಅನುಷ್ಠಾನದಿಂದ ರೈಲು ಮಾರ್ಗದ ಒಟ್ಟು ಉದ್ದ 128 ಕಿ.ಮೀಗೆ ವಿಸ್ತಾರವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜಕಾಲುವೆಗಳ ಪಕ್ಕ ಹೊಸ ರಸ್ತೆಗಳ ನಿರ್ಮಾಣಕ್ಕೆ ₹ 3000 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ನಗರಕ್ಕೆ ಹೆಚ್ಚುವರಿಯಾಗಿ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ₹6,939 ಕೋಟಿ ಅನುದಾನ ಬೇಕಾಗಬಹುದು ಎಂದು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ.