ಉಡುಪಿ: ರೈತ ವಿರೋಧಿ ಕೃಷಿ ಮತ್ತು ಭೂಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಮೋದಿ ಸರಕಾರ ನಡೆಸಿರುವ ದಾಳಿಯನ್ನು ಖಂಡಿಸಿ ಹಾಗೂ ರೈತರ ಹೋರಾಟವನ್ನು ಬೆಂಬಲಿಸಿ ಸಿಐಟಿಯು, ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘ, ಅಖಿಲ ಭಾರತ ಕಿಸಾನ್ ಸಂಘದ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಿಐಟಿಯು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ದೇಶವನ್ನು ಬಂಡವಾಳ ಶಾಹಿಗಳ ಕೈಗೆ ಕೊಡುವುದೇ ಬಿಜೆಪಿಯ ದೇಶಭಕ್ತಿ. ಇದು ರೈತರು, ಕಾರ್ಮಿಕರು, ಕೂಲಿಕಾರರಿಗೆ ಮಾರಕ. ಬಿಜೆಪಿಯ ಬಂಡವಾಳಗಾರರ ಪರವಾದ ರಾಷ್ಟ್ರೀಯತೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಸಣ್ಣ ಕೈಗಾರಿಕೆಗಳು ನಾಶವಾಗುತ್ತಿದ್ದು, ನಿರುದ್ಯೋಗ ಉಲ್ಬಣಗೊಂಡು ಜಿಡಿಪಿ ಕುಸಿಯುತ್ತಿದೆ. ಜನರ ಆದಾಯ ಸ್ಥಗಿತಗೊಂಡಿದೆ. ರೈತ ವಿರೋಧಿ, ಭೂಸುಧಾರಣಾ ತಿದ್ದುಪಡಿ ಕಾಯ್ದೆಗಳು ಜನರಿಗೆ ಮತ್ತಷ್ಟು ಸಂಕಷ್ಟ ತರಲಿದೆ. ಇಂತಹ ನೀತಿಗಳ ವಿರುದ್ದ ದಹಲಿ ರೈತರು ಹೋರಾಟ ನಡೆಸುತ್ತಿದ್ದರೆ. ಸರಕಾರ ಕೂಡಲೇ ಅವರ ಮೇಲೆ ದಾಖಲಿಸಿರುವ ಕೇಸುಗಳನ್ನು ವಾಪಾಸ್ಸು ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಮುಖಂಡರಾದ ಕೆ.ಶಂಕರ್, ಎಚ್.ನರಸಿಂಹ, ಶಶಿಧರ ಗೊಲ್ಲ, ಮಹಾಬಲ ವಡೇರಹೋಬಳಿ, ಬಲ್ಕೀಸ್, ಕೃಷಿಕೂಲಿಕಾರರ ಸಂಘದ ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.












