ಮಾಹೆ: ‘ವಚನಗಳನ್ನು ಓದು’- ಪ್ರೊ.ರಾಜೇಂದ್ರ ಚೆನ್ನಿ ಅವರಿಂದ ವಿಶೇಷ ಉಪನ್ಯಾಸ

ಮಣಿಪಾಲ: ಹನ್ನೆರಡನೇ ಶತಮಾನದ ಶರಣ ಚಳವಳಿಯ ‘ನವ ರಾಜಕಾರಣ’ ಕರ್ನಾಟಕದಲ್ಲಿ ಅಪೂರ್ವವಾದ ವಚನ ಸಾಹಿತ್ಯಕ್ಕೆ ನಾಂದಿಯಾಗಿ ‘ನವ ಕಾವ್ಯಮೀಮಾಂಸೆ’ಯ ಹುಟ್ಟಿಗೆ ಕಾರಣವಾಯಿತು ಎಂದು ಖ್ಯಾತ ಸಂಸ್ಕೃತಿ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರು ನುಡಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ‘ವಚನಗಳನ್ನು ಓದು’ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ.ಚೆನ್ನಿ, ಶರಣ ಚಳವಳಿಯ ಸಂದರ್ಭದಲ್ಲಿ ವಿವಿಧ ವೃತ್ತಿ ಮತ್ತು ಸಾಮಾಜಿಕ ಸ್ತರಗಳಿಗೆ ಸೇರಿದ ಪುರುಷ ಮತ್ತು ಮಹಿಳೆಯರು ಕಾವ್ಯಗಳನ್ನು ರಚಿಸಿ ಆ ಯುಗದ ಕಾವ್ಯಮೀಮಾಂಸೆಯನ್ನೇ ಬದಲಾಯಿಸಿದರು. ಅದು ಜಾತಿ ಮತ್ತು ವರ್ಗಗಳು ಅತಿಯಾಗಿದ್ದ ಹಿಂಸಾತ್ಮಕ ಯುಗ, ಹಾಗಾಗಿ ಆ ಹೊತ್ತಲ್ಲಿ ‘ದಯೆ’ಯ ಬಗ್ಗೆ ಮಾತನಾಡುವ ಅಗತ್ಯವಿತ್ತು. ಶ್ರೇಣೀಕೃತ ಜಾತಿ-ಸಂರಚನೆಯನ್ನು ಮುರಿದು ಆಧ್ಯಾತ್ಮಿಕ ಅನುಭವವು ಯಾವುದೇ ವರ್ಗಗಳಿಗೆ ಸೀಮಿತವಾಗದೆ ಎಲ್ಲರಿಗೂ ಲಭ್ಯವಾಗುವಂತೆ ಬಸವಣ್ಣ (ಬಸವೇಶ್ವರ), ಅಕ್ಕ ಮಹಾದೇವಿ, ಅಲ್ಲಮಪ್ರಭು, ದೇವರ ದಾಸಿಮಯ್ಯ- ಹೀಗೆ ಅನೇಕರು ಬರೆದು ಬದುಕಿದ್ದಾರೆ.

ವಚನಗಳು ದುಡಿಯುವ ವರ್ಗದ ಅಧಿಕೃತ ಧ್ವನಿಯೂ ಆಗಿತ್ತು. ಜಾತಿ, ಲಿಂಗ, ಆಚಾರ, ಸಾಂಪ್ರದಾಯಿಕ ತಾರತಮ್ಯಗಳ ನಿರಾಕರಣೆ ಮತ್ತು ದುಡಿಮೆಯನ್ನು (ಶ್ರಮ) ಪೂಜೆಯಾಗಿ ಸ್ವೀಕರಿಸುವುದು (ಕಾಯಕವೇ ಕೈಲಾಸ), ಕಾವ್ಯದ ಭಾಷೆಯನ್ನೇ ಬದಲಾಯಿಸಿತು. ಬಸವಣ್ಣನವರು ‘ಆನು ಒಲಿದಂತೆ ಹಾಡುವೆನು’ ಎಂದು ಘೋಷಿಸಿ ಯುಗದ ಮೀಮಾಂಸೆಗೆ ನಾಂದಿ ಹಾಡಿದರು. ಶ್ರೇಷ್ಠ ಕವಯಿತ್ರಿ ಅಕ್ಕ ಮಹಾದೇವಿ ಲಿಂಗ ತಾರತಮ್ಯದ ಕುರಿತು ಖಚಿತವಾದ ಮಾತುಗಳಲ್ಲಿ ಬರೆದಿದ್ದಾರೆ. ಶೃಂಗಾರದ ಉಪಮೆಗಳ ಮೂಲಕ ಆಧ್ಯಾತ್ಮಿಕತೆಯ ಸೌಂದರ್ಯವನ್ನು ಅಕ್ಕ ಚಿತ್ರಿಸಿದರು.

ಅಲ್ಲಮಪ್ರಭು ಆ ಕಾಲದ ಎಲ್ಲಾ ತಾತ್ವಿಕ ಪರಂಪರೆಗಳೊಂದಿಗೆ ವಾಗ್ವಾದದಲ್ಲಿ ತೊಡಗಿಸಿಕೊಂಡರು ಎಂದು ಪ್ರೊ.ಚೆನ್ನಿ ಹೇಳಿದರು. ತಮ್ಮ ಮಾತನ್ನು ಪುಷ್ಟಿಕರಿಸುತ್ತ ದೇವರ ದಾಸಿಮಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ವಿವಿಧ ವಚನಕಾರರ ಹಲವಾರು ವಚನಗಳನ್ನು ಉಲ್ಲೇಖಿಸಿದರು.

ಪ್ರಾರಂಭದಲ್ಲಿ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಶರಣ ಆಂದೋಲನವು ಸಾಮಾಜಿಕವಾಗಿ ಮತ್ತು ತಾತ್ವಿಕವಾಗಿ ಅತ್ಯಂತ ಪ್ರಕ್ಷುಬ್ಧ ಹಂತವಾಗಿದೆ ಮತ್ತು ವಚನಗಳಲ್ಲಿ ಅದು ಅತ್ಯುತ್ತಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಶ್ರಾವ್ಯ ಬಾಸ್ರಿ ‘ದಯವಿಲ್ಲದ ಧರ್ಮವಾವುದಯ್ಯ?’ ಸೇರಿದಂತೆ ಅನೇಕ ವಚನಗಳನ್ನು ಹಾಡಿದರು.

ಸುಹಾನಿ ರಾಜ್‌ಪೂತ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವೆಲಿಕಾ ಶಾಂಗ್‌ಪ್ಲ್ಯಾಂಗ್ ಧನ್ಯವಾದ ಅರ್ಪಿಸಿದರು.