ಪ್ರಿಯಾಂಕ ಖರ್ಗೆ ಹೇಳಿಕೆಯಲ್ಲಿ ತಪ್ಪೇನಿಲ್ಲ ಆರ್ ಎಸ್ ಎಸ್ ಗೆ‌ ನಿಷೇಧ ಹೇರಬೇಕು ಎಂದರೆ ಹೇರಲೇಬೇಕು: ಮಂಜುನಾಥ ಭಂಡಾರಿ

ಉಡುಪಿ: ಕಾಂಗ್ರೆಸ್‌ನ ಯಾವ ನಾಯಕರು ಏನು ಹೇಳಿದ್ದಾರೆ ಎನ್ನೋದು ಮುಖ್ಯವಲ್ಲ, ಎಐಸಿಸಿ ಅಧ್ಯಕ್ಷರು ಏನು ಹೇಳಿದ್ದಾರೆ ಎನ್ನುವುದೇ ಮುಖ್ಯ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ನಾಯಕರ ಬಳಿ ಮಾಧ್ಯಮಗಳು ಅಭಿಪ್ರಾಯ ಕೇಳಿದಾಗ ಹೇಳುತ್ತಾರೆ. ಸೆಪ್ಟೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ. ವಾಂತಿಯೂ ಆಗುವುದಿಲ್ಲ. ಪಕ್ಷ ಬಲಿಷ್ಠವಾಗಿದ್ದು, ವರಿಷ್ಠ ಮಂಡಳಿ ನಿರ್ಧಾರ ತೆಗೆದುಕೊಳ್ಳುತ್ತದೆ. ಬದಲಾವಣೆ ಆಗಬೇಕು ಎಂದರೆ ಅಖಿಲ ಭಾರತ ಮಟ್ಟದಲ್ಲಿ ನಿರ್ಧಾರ ಮಾಡುತ್ತಾರೆ. ಒಬ್ಬರು, ಇಬ್ಬರು ನಾಯಕರಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಎಂದರು.

ಆರೆಸ್ಸೆಸ್ ನಿಷೇಧ ಸಂಬಂಧ ಮಾತನಾಡಿ, ಪ್ರಿಯಾಂಕ ಖರ್ಗೆ ಅವರು ಹೇಳಿದ್ದರಲ್ಲಿ ತಪ್ಪೇನಿದೆ? ನೂರಕ್ಕೆ ನೂರು ಸತ್ಯ ಹೇಳಿದ್ದಾರೆ. ಆರೆಸ್ಸೆಸ್‌ಗೆ ನಿಷೇಧ ಹೇರಬೇಕು ಎಂದರೆ ಹೇರಲೇ ಬೇಕು. ಸಂವಿಧಾನಕ್ಕಿಂತ ದೊಡ್ಡದು ಯಾವುದೂ ಇಲ್ಲ, ಮತ್ತೆ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರರಷ್ಟು ಆರೆಸ್ಸೆಸ್ ನಿಷೇಧದ ಬಗ್ಗೆ ವಿಮರ್ಶೆ ಮಾಡುತ್ತೇವೆ ಎಂದಿದ್ದಾರೆ.

ಸುರ್ಜೆವಾಲ ಅವರು ಕಪ್ಪ ತೆಗೆದುಕೊಂಡು ಹೋಗಲು ಬಂದಿದ್ದಾರೆ. ಎಂಬ ಸಿ.ಟಿ. ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಸರಕಾರ ಇದ್ದಾಗ ವೀಕ್ಷಕರು, ಪ್ರಧಾನ ಕಾರ್ಯದರ್ಶಿಗಳು ಇದೇ ಕೆಲಸಕ್ಕೆ ಬರ್ತಾ ಇದ್ದರೆ? ಕಾಂಗ್ರೆಸ್ ಪಕ್ಷಕ್ಕೆ ಯಾರು ಕಪ್ಪ ಕೊಡಬೇಕಿಲ್ಲ, ಕಾಂಗ್ರೆಸ್ ಆಸ್ತಿ ಎಷ್ಟಿದೆ? ಪಕ್ಷದ ನಾಯಕರ ಆಸ್ತಿ ಎಷ್ಟಿದೆ? ನಿನ್ನೆ ಮೊನ್ನೆ ಬಂದ ಬಿಜೆಪಿ ಪಕ್ಷದ ಆಸ್ತಿ ಎಷ್ಟಾಗಿದೆ? ಬಿಜೆಪಿ ನಾಯಕರು 50 ವರ್ಷಗಳ ಹಿಂದೆ ಹೇಗಿದ್ದರು?ಈಗ ಹೇಗಾಗಿದ್ದಾರೆ ಎಂಬುದು ತಿಳಿಯುತ್ತದೆ. ಕಾಂಗ್ರೆಸ್ ಕಾರ್ಯಕರ್ತರ ಪಕ್ಷ. ಸುರ್ಜೇವಾಲಾ ಪಕ್ಷದ ನಾಯಕರ ಅಹವಾಲು ಕೇಳಲು ಬಂದಿದ್ದಾರೆ ಎಂದರು.