ಸುಳ್ಯ: ತಂಗಿಗೆ ವಾಟ್ಸಾಪ್ ವಾಯ್ಸ್ ಸಂದೇಶ ಕಳುಹಿಸಿ ಅವಿನಾಶ್ ಮೋಟಾರ್ಸ್ ನ ಮಾಲೀಕ ನಾರಾಯಣ ರೈ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು (ಮಂಗಳವಾರ )ಬೆಳಕಿಗೆ ಬಂದಿದೆ.
ಅವಿನಾಶ್ ರೈ ಅವರ ಪತ್ನಿ ಮತ್ತು ಮಕ್ಕಳು ಮದುವೆ ಸಮಾರಂಭವೊಂದಕ್ಕೆ ಬೆಂಗಳೂರಿಗೆ ತೆರಳಿದ್ದರು. ಸಂಬಂಧಿಯಾಗಿರುವ ಯುವಕನೊಬ್ಬ ಮನೆಯಲ್ಲಿದ್ದರು. ರಾತ್ರಿ 11.45 ರ ಸುಮಾರಿಗೆ ಅವರು ತಂಗಿಯಾಗಿರುವ ನಳಿನಿಯವರಿಗೆ ವಾಟ್ಸಾಪ್ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು.
ತಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುವುದಾಗಿ ವಾಯ್ಸ್ ಮೆಸೇಜ್ನಲ್ಲಿತ್ತು. ಆದರೆ ತಡರಾತ್ರಿಯಾಗಿದ್ದುದರಿಂದ ತಂಗಿ ಇಂದು ಬೆಳಿಗ್ಗೆಯಷ್ಟೇ ಈ ಮೆಸೇಜ್ ನೋಡಿದ್ದರು. ಕೂಡಲೇ ಅವರು ಮನೆಯಲ್ಲಿದ್ದ ಯುವಕನಿಗೆ ಫೋನ್ ಮಾಡಿದ್ದರು. ಆದರೆ ಯುವಕ ಫೋನ್ ತೆಗೆದಿರಲಿಲ್ಲ. ಹೀಗಾಗಿ ಫಿಟ್ಟರ್ಗೆ ಕರೆ ಮಾಡಿ ತಕ್ಷಣ ಮನೆಗೆ ಹೋಗುವಂತೆ ತಿಳಿಸಿದರು. ಕೂಡಲೇ ಅವರು ಮನೆಗೆ ಹೋಗಿ ಯುವಕನನ್ನು ಎಬ್ಬಿಸಿ ನಾರಾಯಣ ರೈಗಳ ಕೋಣೆಗೆ ಹೋಗಿ ನೋಡಿದಾಗ ಅವರು ಕೊಠಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಾವಿಗೂ ಮುನ್ನ ನಾರಾಯಣ ರೈ ಡೆತ್ನೋಟ್ ಬರೆದಿಟ್ಟಿದ್ದು, ‘ಅಸೌಖ್ಯದಿಂದ ತನಗೆ ಬದುಕಲು ಕಷ್ಟವಾಗುತ್ತಿದೆ. ಮನೆಯವರಿಗೂ ಕಷ್ಟ ಕೊಡಲು ಮನಸ್ಸಿಲ್ಲ, ಹೀಗಾಗಿ ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ಹಾಗೆ ತನ್ನ ಮರಣದ ಕಾರಣದಿಂದ ಬಸ್ಗಳ ಓಡಾಟವನ್ನು ನಿಲ್ಲಿಸಬಾರದು. ಕಪ್ಪು ಫ್ಲ್ಯಾಗ್ ಹಾಕಿ ಬಸ್ ಓಡಿಸಬೇಕು ಎಂದೂ ಅದರಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.
ನಾರಾಯಣ ರೈ ಸುಳ್ಯ ಭಾಗದಲ್ಲಿ ಗ್ರಾಮೀಣ ಸಂಪರ್ಕ ಕ್ರಾಂತಿಯ ಹರಿಕಾರನಾಗಿದ್ದರು. ಅವರು ಪತ್ನಿ ವಿಜಯಾ ರೈ, ಪುತ್ರರಾದ ಅವಿನಾಶ್ ರೈ, ಅಭಿಲಾಷ್ ರೈ ಅವರನ್ನು ಅಗಲಿದ್ದಾರೆ.












