ಇಂಡೋನೇಷ್ಯಾದಿಂದ ಭಾರತಕ್ಕೆ ವಾಪಸ್​ ಆದ ಪ್ರಧಾನಿ ಮೋದಿ : ಆಸಿಯಾನ್​ ಶೃಂಗಸಭೆ

ಜಕಾರ್ತ: ‘ಆಸಿಯಾನ್’ ಭಾರತದ ಆಯಕ್ಟ್ ಈಸ್ಟ್ ಸಿದ್ಧಾಂತದ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಮೂಲಕ ಚೀನಾಕ್ಕೆ ಗುದ್ದು ನೀಡಿದ್ದಾರೆ.ಜಕಾರ್ತದಲ್ಲಿ ಗುರುವಾರ ನಡೆದ 20ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಮಹತ್ವದ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಶೃಂಗಸಭೆಯು 10 ಸದಸ್ಯರ ಆಸಿಯಾನ್ ಗುಂಪಿನ ನಾಯಕರನ್ನು ಒಟ್ಟುಗೂಡಿಸಿತು. ಭಾರತದ ‘ಆಯಕ್ಟ್ ಈಸ್ಟ್’ ನೀತಿಯಲ್ಲಿ ಆಸಿಯಾನ್​ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು

. ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಮತ್ತು ಹಲವು ರಾಷ್ಟ್ರಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಿರುವ ಚೀನಾದ ಈಗಿನ ಬೆಳವಣಿಗೆಗಳ ನಡುವೆ ಪ್ರಧಾನಿಗಳ ಈ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.
ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ 20ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಟಾಂಗ್​ ನೀಡಿದ್ದಾರೆ.

ಜಾಗತಿಕ ಸವಾಲು ಎದುರಿಸಲು ಒಗ್ಗಟ್ಟು ಅಗತ್ಯ: ಈ ಹೇಳಿಕೆ ಚೀನಾ ಉದ್ದೇಶಿಸಿ ಹೇಳಿದ್ದಾಗಿದೆ ಎಂದು ವಿಶ್ಲೇಷಿಸಲಾಗಿದೆ. ತೈವಾನ್​, ಶ್ರೀಲಂಕಾ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳ ಮೇಲೆ ಡ್ರ್ಯಾಗನ್​ ರಾಷ್ಟ್ರ ದಬ್ಬಾಳಿಕೆ ನಡೆಸುತ್ತಿರುವುದು ಮತ್ತು ಅಲ್ಲಿನ ಪ್ರಾದೇಶಿಕ ಹಕ್ಕುಗಳು ಒತ್ತಡಕ್ಕೆ ಸಿಲುಕಿರುವುದು ಆತಂಕಕ್ಕೆ ಕಾರಣವಾಗಿವೆ. ಭಯೋತ್ಪಾದನೆ, ಉಗ್ರವಾದ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳ ಬಗ್ಗೆಯೂ ಗಮನ ಸೆಳೆದ ಪ್ರಧಾನಿ ಮೋದಿ, ಅಂತರರಾಷ್ಟ್ರೀಯ ಸಮುದಾಯ ಇಂತಹ ಸವಾಲುಗಳನ್ನು ಎದುರಿಸಲು ಒಗ್ಗೂಡುವುದು ಅತ್ಯಗತ್ಯ. ಇಂತಹ ಸನ್ನಿವೇಶಗಳಲ್ಲಿ ಭಾರತ ಮುನ್ನುಗ್ಗಲಿದೆ ಎಂದು ಅವರು ಹೇಳಿದರು.

ನೆರೆಹೊರೆಯವರೊಂದಿಗೆ ಬಾಂಧವ್ಯವನ್ನು ವೃದ್ಧಿಸುವ ಆಯಕ್ಟ್ ಈಸ್ಟ್ ನೀತಿಯನ್ನು ಬಲಪಡಿಸುವ ಕುರಿತು ಭಾರತ ಬದ್ಧವಾಗಿದೆ. ಅಂತಾರಾಷ್ಟ್ರೀಯ ಕಾನೂನನ್ನು ಎಲ್ಲಾ ದೇಶಗಳಿಗೂ ಅನ್ವಯಿಸುವ ಹಾಗೆ ಇಂಡೋ-ಪೆಸಿಫಿಕ್ ಪ್ರದೇಶದ ಮೇಲೂ ಕಠಿಣ ನಿಯಮಗಳು ಅಗತ್ಯವಾಗಿವೆ ಎಂದು ಮೋದಿ ಅಭಿಪ್ರಾಯಪಟ್ಟರು.

ಆಸಿಯಾನ್-ಭಾರತ ಶೃಂಗಸಭೆಯು ಉತ್ತಮ ಭವಿಷ್ಯಕ್ಕಾಗಿ ಮತ್ತು ಮಾನವ ಜಾತಿ ಪ್ರಗತಿಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತದೆ. ಇದು ರಾಷ್ಟ್ರಗಳ ನಡುವೆ ಪರಸ್ಪರ ಬಾಂಧವ್ಯವನ್ನು ವೃದ್ಧಿಸುವ ವೇದಿಕೆಯಾಗಿದೆ ಎಂದು ಅವರು ಹೇಳಿದರು.ಭಾರತದ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಜಿ- 20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರು ಹಾಜರಾಗುವುದಾಗಿ ಘೋಷಿಸಿದ ಬೆನ್ನಲ್ಲೇ, ಜಕಾರ್ತಾದಲ್ಲಿ ಪ್ರಧಾನಿ ಮೋದಿ ಅವರು ಚೀನಾಗೆ ಟಾಂಗ್​ ನೀಡುವ ಮಾದರಿ ಹೇಳಿಕೆ ನೀಡಿದ್ದು, ಗಮನಾರ್ಹವಾಗಿದೆ.

ಭಾರತಕ್ಕೆ ವಾಪಸ್ಸಾದ ಪ್ರಧಾನಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ 20 ನೇ ಆಸಿಯಾನ್-ಭಾರತ ಮತ್ತು 18 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ರಾತ್ರಿ ವಾಪಸ್ಸಾದರು. ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಆಸಿಯಾನ್ ರಾಷ್ಟ್ರಗಳ ನಾಯಕರೊಂದಿಗೆ ಸಮಗ್ರ ಕಾರ್ಯತಂತ್ರ ಬಲಪಡಿಸುವ ಮತ್ತು ಭವಿಷ್ಯದ ಸಹಕಾರದ ಕುರಿತು ವ್ಯಾಪಕವಾದ ಚರ್ಚೆಗಳನ್ನು ನಡೆಸಿದರು.ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವಿನ ಸಂಬಂಧಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಈ ರಾಷ್ಟ್ರಗಳು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮಾನವ ಹಕ್ಕುಗಳನ್ನು ಪರಸ್ಪರ ಗೌರವಿಸುತ್ತವೆ. ಇದರ ಜೊತೆಗೆ, ಪ್ರಾದೇಶಿಕ ಏಕತೆ, ಶಾಂತಿ, ಸಮೃದ್ಧಿ ಮತ್ತು ನಂಬಿಕೆಗಳು ರಾಷ್ಟ್ರಗಳನ್ನು ಜೋಡಿಸಿವೆ. ಇವೆಲ್ಲವೂ ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಸಾರುತ್ತವೆ ಎಂದು ಅಭಿಪ್ರಾಯಪಟ್ಟರು.