ಉಡುಪಿ: ಮೆಸ್ಕಾಂ ಜಾಗೃತ ದಳದ ಹೆಡ್ ಕಾನ್ ಸ್ಟೇಬಲ್ ಬಿ. ವಿಜಯಕುಮಾರ್ ಅವರು ಇಲಾಖೆಯಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ 2025-26ನೇ ಸಾಲಿನ ‘ಡಿಜಿ-ಐಜಿಪಿ ಪ್ರಶಂಸನಾ ಪದಕ’ಕ್ಕೆ ಆಯ್ಕೆಯಾಗಿದ್ದಾರೆ.
ವಿಜಯಕುಮಾರ್ ಅವರು ಈ ಹಿಂದೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ಭಾರತದ ರಾಷ್ಟ್ರಪತಿಗಳ ಶ್ಲಾಘನೀಯ ಪದಕವನ್ನು ಪಡೆದಿದ್ದಾರೆ.
ಮೂಲತಃ ಬೆಳ್ತಂಗಡಿಯವರಾಗಿದ್ದು, ದಿವಂಗತ ಗೋಪಾಲಕೃಷ್ಣ ಹಾಗೂ ಶಾರದ ದಂಪತಿಯ ಪುತ್ರರಾಗಿದ್ದಾರೆ. ಸುಮಾರು 33 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಕರ್ತವ್ಯನಿಷ್ಠೆ ಹಾಗೂ ಜನಸ್ನೇಹಿ ಕಾರ್ಯವೈಖರಿಯಿಂದ ಗುರುತಿಸಿಕೊಂಡಿದ್ದಾರೆ.
ತಮ್ಮ ಸೇವಾವಧಿಯಲ್ಲಿ ಉಳ್ಳಾಲ, ಪಣಂಬೂರು, ಕದ್ರಿ, ಉರ್ವ, ಪುತ್ತೂರು ನಗರ, ಉಡುಪಿ ನಗರ, ಉಡುಪಿ ಸಂಚಾರ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ ಹಾಗೂ ಡಿಸಿಆರ್ಬಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಅವರ ಸಾಧನೆಗೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

















