ಉಡುಪಿ: ಬಿಜೆಪಿ ಟಿಕೆಟ್ ದಕ್ಕಿಸಿಕೊಳ್ಳಲು ತಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆದು ಅವಕಾಶವಾದದ ರಾಜಕಾರಣವನ್ನು ಪ್ರಮೋದ್ ಮಧ್ವರಾಜ್ ಅವರು ಮಾಡುತ್ತಿದ್ದಾರೆ. ನಮೋ ಎಂದರೆ ಮೋಸ ಎಂದಿದ್ದ ಅವರು ಕಳೆದ ಬಾರಿ ಖಾಸಗಿ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯಕ್ಕೆ ನಂಬರ್ ವನ್ ಶಾಸಕನಾಗಿ ಮೂಡಿ ಬಂದಿದ್ದರೂ ಬಿಜೆಪಿಯ ಕಾರ್ಯಕರ್ತರು ನನ್ನನ್ನು ಸೋಲಿಸಿದ್ದಕ್ಕೆ ನನಗೆ ಕಿಂಚಿತ್ತೂ ಬೇಸರವಿಲ್ಲ, ಮೋದಿಯವರ ಕೈ ಬಲಪಡಿಸಲು ನನ್ನನ್ನು ಸೋಲಿಸಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಈ ಮಾತುಗಳು ಅವರ ಅವಕಾಶವಾದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರು ತಿಳಿಸಿದ್ದಾರೆ.
ಮಧ್ವರಾಜ್ ಅವರಿಗೆ ಕಾಂಗ್ರೆಸ್ ಪಕ್ಷವು ಐದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಹಲವು ಬಾರಿ ಸೋತ ಹೊರತಾಗಿಯೂ ಪಕ್ಷ ಅವರ ಕೈ ಬಿಟ್ಟಿರಲಿಲ್ಲ. 2013ರಲ್ಲಿ ಗೆದ್ದಾಗ ಅವರನ್ನು ರಾಜ್ಯ ನಾಯಕರಾಗಿ ಬೆಳೆಸುವ ಉದ್ದೇಶದಿಂದ ಪಕ್ಷ ಅವರಿಗೆ ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ, ಸಚಿವ, ಬಳಿಕ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಸ್ಥಾನಮಾನ ನೀಡಿತ್ತು. ಪಕ್ಷದ ಹಿರಿ-ಕಿರಿಯ ನಾಯಕರು ಮತ್ತು ಕಾರ್ಯಕರ್ತರು ಹಗಲಿರುಳು ದುಡಿದು ಅವರ ಗೆಲುವಿಗಾಗಿ ಶ್ರಮಿಸಿದ್ದರಿಂದ ಅವರು ಆ ಸ್ಥಾನ ತಲುಪಲು ಸಾಧ್ಯವಾಯಿತು. ಆದರೆ ಅವರು ಯಾರ ಬಳಿಯೂ ಚರ್ಚಿಸದೆ, ಯಾರ ಬಳಿಯೂ ತಿಳಿಸದೆ, ಅವರ ಗೆಲುವಿಗಾಗಿ ಶ್ರಮಿಸಿದ ನಾಯಕರ ಹಾಗೂ ಕಾರ್ಯಕರ್ತರ ಭಾವನೆಗೆ ಬೆಲೆಯೂ ಕೊಡದೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿ ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ.
ಇದೀಗ ಬಿಜೆಪಿಯ ನಾಯಕರನ್ನು, ಕಾರ್ಯಕರ್ತರನ್ನು ಓಲೈಸಲು ಬಿಜೆಪಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಇವರ ಈ ಅವಕಾಶವಾದಿ ರಾಜಕಾರಣ ಜನರಿಗೆ ಅರ್ಥವಾಗಿದ್ದು, ಮುಂದಿನ ದಿನಗಳಲ್ಲಿ ಜನರೇ ಪ್ರಮೋದ್ ಮಧ್ವರಾಜ್ ಅವರಿಗೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












