25 ಖೈದಿಗಳಿರೋ ಸೆಲ್ ಗೆ ಪ್ರಜ್ವಲ್ ರೇವಣ್ಣ ಶಿಫ್ಟ್,”ನಂಗೆ ಈ ಜಾಗ ಬೇಡ, ಇಲ್ಲಿ ನಂಗೆ ಸೋಂಕು ಹರಡುತ್ತೆ”ಎಂದು ರಗಳೆ ಮಾಡಿದ ಪ್ರಜ್ವಲ್!

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಪತ್ತೆಯಾದ ಬಳಿಕ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದ್ದು, ಇದೀಗ ಹೊಸ ಬ್ಯಾರಕ್‌ನಲ್ಲಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಡಿಜಿಪಿ ಸೂಚನೆ ಮೇರೆಗೆ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ಭದ್ರತಾ ವಿಭಾಗದ ಬ್ಯಾರಕ್‌ನಿಂದ ಸಾಮಾನ್ಯ ಕೈದಿಗಳಿರುವ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ. ಸುಮಾರು 25 ಮಂದಿ ಕೈದಿಗಳಿರುವ ಈ ಬ್ಯಾರಕ್‌ನಲ್ಲಿ ಕೆಮ್ಮು, ಕಜ್ಜಿ ಸೇರಿದಂತೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕೈದಿಗಳಿದ್ದಾರೆ ಎನ್ನಲಾಗಿದೆ.

ಹೊಸ ಬ್ಯಾರಕ್‌ನಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಪ್ರಜ್ವಲ್ ರೇವಣ್ಣ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. “ಬ್ಯಾರಕ್‌ನಲ್ಲಿರುವ ಕೆಲವರಿಗೆ ಕಜ್ಜಿ, ಕೆಮ್ಮು ಇರುವುದರಿಂದ ನನಗೂ ಸೋಂಕು ಹರಡುವ ಭಯವಿದೆ. ಹೀಗಾಗಿ ನನ್ನನ್ನು ಬೇರೆ ಸೆಲ್‌ಗೆ ವರ್ಗಾಯಿಸಿ” ಎಂದು ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಒಂದೇ ಬ್ಯಾರಕ್‌ನಲ್ಲಿ 25 ಮಂದಿ ಕೈದಿಗಳು ಇರುವುದರಿಂದ ಎಲ್ಲರೂ ಒಂದೇ ಶೌಚಾಲಯ ಬಳಸಬೇಕಾದ ಪರಿಸ್ಥಿತಿ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಜ್ವಲ್ ಅವರ ಮನವಿಗೆ ತಕ್ಷಣ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.