ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ಪ್ರಯೋಜನ ಪಡೆಯಿರಿ

ಉಡುಪಿ, ಜೂನ್ 21: ಭಾರತ ಸರ್ಕಾರವು ರೈತರ ಆದಾಯ ವೃದ್ಧಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು, ಸದ್ರಿ ಯೋಜನೆಯಡಿ ಭೂ-ಒಡತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ 3 ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು ರೂ. 6000/-ಗಳನ್ನು ನೀಡಲು ಉದ್ದೇಶಿಸಿದ್ದು, ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ (ಗ್ರಾಮ ಪಂಚಾಯತ್), ಅಟಲ್‍ಜಿ ಜನ ಸ್ನೇಹಿ ಕೇಂದ್ರ, ನಾಡಾ ಕಛೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿಗೆ ತೆರಳಿ ಸ್ವಯಂ ಘೋಷಣೆ ಅನುಬಂಧದಲ್ಲಿ ತಮ್ಮ ಹೆಸರು, ಆಧಾರ್ ಸಂಖ್ಯೆ, ಜಮೀನಿನ ವಿವರಗಳನ್ನು ನಮೂದಿಸಿ, ಸ್ವಯಂ ಘೋಷಣೆಯನ್ನು ದಿನಾಂಕ : 30.06.2019 ರ ಒಳಗಾಗಿ ನೀಡಲು ತಿಳಿಸಿದೆ.
ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಭೂಮಿ ಹೊಂದಿರುವ ಸಂಘ-ಸಂಸ್ಥೆಗಳು, ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ಮಾಜಿ ಮತ್ತು ಹಾಲಿ ಸಚಿವರು, ರಾಜ್ಯ ಸಚಿವರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ರಾಜ್ಯವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು, ನಗರ ಸಭೆ ಅಧ್ಯಕ್ಷರು, ಪುರಸಭೆ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ನಿವೃತ್ತ ಮತ್ತು ಹಾಲಿ ಸೇವೆಯಲ್ಲಿರುವ ಕೇಂದ್ರ, ರಾಜ್ಯ ಸರ್ಕಾರಗಳ ಸಚಿವಾಲಯ ಕಛೇರಿ, ಇಲಾಖೆ, ಕ್ಷೇತ್ರ ಕಛೇರಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಅದರ ಅಂಗಸಂಸ್ಥೆಗಳು, ಸ್ವಾಯತ್ತೆ ಸಂಸ್ಥೆಗಳ ಅಧಿಕಾರಿಗಳು ಹಾಗೂ ನೌಕರರು, ಸ್ಥಳೀಯ ಸಂಸ್ಥೆಗಳ ಗ್ರೂಪ್ ಡಿ ಮತ್ತು ನಾಲ್ಕನೆ ವರ್ಗ ಅಥವಾ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಹೊರತುಪಡಿಸಿ ಉಳಿದ ಖಾಯಂ ನೌಕರರು ಮತ್ತು ರೂ. 10000/- ಅಥವಾ ಹೆಚ್ಚಿನ ಮೊತ್ತ ಪಡೆಯುತ್ತಿರುವ ವಯೋ ನಿವೃತ್ತಿ, ನಿವೃತ್ತಿ ಪಿಂಚಣಿದಾರರು, ಕಳೆದ ಸಾಲಿನ ಆದಾಯ ತೆರಿಗೆ ಪಾವತಿದಾರರು, ವೈದ್ಯ, ಅಭಿಯಂತರ, ವಕೀಲ, ಲೆಕ್ಕ ಪರಿಶೋಧಕರು, ವಾಸ್ತು ಶಿಲ್ಪದಂತಹ ವೃತ್ತಿಪರರು ಮತ್ತು ವೃತ್ತಿಪರ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ವೃತ್ತಿಯನ್ನು ಕೈಗೊಳ್ಳುತ್ತಿರುವ ವ್ಯಕ್ತಿಗಳು, ರೈತ ಕುಟುಂಬದಲ್ಲಿ ಒಬ್ಬರು ಅಥವಾ ಹೆಚ್ಚು ಸದಸ್ಯರು ಇದ್ದರೆ ಆ ರೈತ ಕುಟುಂಬ ಯೋಜನೆಯ ಫಲಾನುಭವಿಯಾಗಲು ಅರ್ಹವಿರುವುದಿಲ್ಲ.
ದಿನಾಂಕ 30.06.2019ರ ಒಳಗಾಗಿ ರೈತರು ನೋಂದಣಿ ಮಾಡಿಕೊಳ್ಳದಿದ್ದರೆ ಅವರಿಗೆ ಒಂದನೆ ಕಂತಿನ ಸಹಾಯಧನ ವಂಚಿತರಾಗಬಹುದು. ಆದ್ದರಿಂದ ರೈತರು ಕೊನೆಯ ದಿನಾಂಕದೊಳಗಾಗಿ ನೋಂದಣಿ ಮಾಡಿಕೊಳ್ಳಲು ಮತ್ತೊಮ್ಮೆ ಪ್ರಕಟಣೆಯ ಮೂಲಕ ತಿಳಿಸಿದೆ.