ಮೈದಾನದ ಸುತ್ತ ಪೊಲೀಸ್ ಭದ್ರತೆ : ಭಾರತ – ಆಸ್ಟ್ರೇಲಿಯಾ ಅಂತಿಮ ಟಿ20

ಬೆಂಗಳೂರು: ಸರಣಿ ಜಯಿಸಿದ ಭಾರತ: 2023ರ ಏಕದಿನ ವಿಶ್ವಕಪ್​ ಮುಕ್ತಾಯವಾದ ನಾಲ್ಕು ದಿನದ ಅಂತರದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣೆ 5 ಟಿ20 ಪಂದ್ಯಗಳ ಸರಣಿಯನ್ನು ಆಯೋಜಿಸಲಾಗಿತ್ತು. ನಡೆದ ನಾಲ್ಕು ಪಂದ್ಯದಲ್ಲಿ ಟೀಮ್​ ಇಂಡಿಯಾ 3-1ರಿಂದ ಸರಣಿ ವಶಪಡಿಸಿಕೊಂಡಿದೆ. ಮೊದಲ ಎರಡು ಟಿ20 ಪಂದ್ಯಗಳನ್ನು ಗೆದ್ದ ಭಾರತ ಮೂರನೇ ಪಂದ್ಯದಲ್ಲಿ ಎಡವಿತು. ರಾಯಪುರದಲ್ಲಿ ನಡೆದ ನಾಲ್ಕನೇ ಪಂದ್ಯವನ್ನು ಗೆದ್ದು ಭಾರತ 3-1ರಿಂದ ಸರಣಿ ತನ್ನದಾಗಿಸಿಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಿದ್ಧವಾಗಿದ್ದು, ಭದ್ರತೆಯ ಹಿನ್ನೆಲೆ ಸ್ಟೇಡಿಯಂ ಸುತ್ತಲೂ ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯಕ್ಕೆ ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ವಿಶ್ವಕಪ್ ಬಳಿಕ ಮೊದಲ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸುತ್ತಿದ್ದು, ಸ್ಟೇಡಿಯಂ ಸುತ್ತಲೂ ಒಂದು ಸಾವಿರಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

“ಮೈದಾನದ ಬಳಿ 8 ಜನ ಎಸಿಪಿಗಳು, 28 ಜನ ಇನ್ಸ್‌ಪೆಕ್ಟರ್, 80 ಜನ ಪಿಎಸ್‌ಐಗಳು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಭದ್ರತಾ ಕಾರ್ಯದಲ್ಲಿ ನಿರತಾಗಿದ್ದಾರೆ. ಅಲ್ಲದೆ 4 ಕೆಎಸ್‌ಆರ್​ಪಿ ತುಕಡಿಗಳು, ಬಾಂಬ್ ನಿಷ್ಕ್ರಿಯದಳ, ಗೃಹರಕ್ಷಕದಳದ ಸಿಬ್ಬಂದಿಗಳೂ ಸಹ ಭದ್ರತೆ ವಹಿಸಲಿದ್ದಾರೆ. ಪಂದ್ಯದ ಸಂದರ್ಭದಲ್ಲಿನ ನಕಲಿ ಟಿಕೆಟ್ ಮಾರಾಟ, ಬೆಟ್ಟಿಂಗ್​ನಲ್ಲಿ ತೊಡಗುವವರ ಮೇಲೆ ತೀವ್ರ ನಿಗಾವಹಿಸಲಾಗಿದ್ದು, ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ” ಎಂದು ಕೇಂದ್ರ ವಿಭಾಗ ಡಿಸಿಪಿ ಶೇಖರ್.ಹೆಚ್.ಟಿ ತಿಳಿಸಿದ್ದಾರೆ.

ಔಪಚಾರಿಕ ಪಂದ್ಯ: ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ ಐದನೇ ಪಂದ್ಯ ಔಪಚಾರಿಕವಾಗಿದೆ. ರಾಯಪುರದ ಪಂದ್ಯವನ್ನು ಭಾರತ ಗೆದ್ದು ಸರಣಿ ಜಯ ಸಾಧಿಸಿದೆ. ಹೀಗಾಗಿ ಭಾರತಕ್ಕೆ ಇದು ಔಪಚಾರಿಕ ಪಂದ್ಯವಾಗಿದೆ. ಸರಣಿಯಲ್ಲಿ ಕೇವಲ ಒಂದೇ ಗೆಲುವನ್ನು ಸಾಧಿಸಿರುವ ಆಸೀಸ್​​​ ಎರಡನೇ ಜಯದೊಂಡಿಗೆ ತವರಿಗೆ ಮರಳುವ ಲೆಕ್ಕಾಚಾರದಲ್ಲಿದೆ.

ಸಂಭಾವ್ಯ ತಂಡ.. ಭಾರತ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ, ರಿಂಕು ಸಿಂಗ್/ಶಿವಂ ದುಬೆ, ಅಕ್ಷರ್ ಪಟೇಲ್/ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ದೀಪಕ್ ಚಾಹರ್, ಅವೇಶ್ ಖಾನ್, ಮುಖೇಶ್ ಕುಮಾರ್

ಆಸ್ಟ್ರೇಲಿಯಾ: ಜೋಶ್ ಫಿಲಿಪ್, ಟ್ರಾವಿಸ್ ಹೆಡ್, ಬೆನ್ ಮ್ಯಾಕ್‌ಡರ್ಮಾಟ್, ಆರನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್, ಬೆನ್ ದ್ವಾರ್ಶುಯಿಸ್, ಕೇನ್ ರಿಚರ್ಡ್‌ಸನ್/ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್‌ಡಾರ್ಫ್, ತನ್ವೀರ್ ಸಂಘ

ತಂಡದಲ್ಲಿ ಬದಲಾವಣೆ ನಿರೀಕ್ಷೆ: ತಂಡದಲ್ಲಿದ್ದು ಕಳೆದ ನಾಲ್ಕು ಪಂದ್ಯದಲ್ಲಿ ಅವಕಾಶ ವಂಚಿತರಾಗಿದ್ದ ಶಿವಂ ದುಬೆ ಮತ್ತು ವಾಷಿಂಗ್ಟನ್​ ಸುಂದರ್ ಈ ಪಂದ್ಯದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಭಾರತದ ಪರ ವಾಷಿಂಗ್ಟನ್ ಸುಂದರ್ 40 ಟಿ20 ಪಂದ್ಯಗಳ 38 ಇನ್ನಿಂಗ್ಸ್‌ಗಳಲ್ಲಿ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಶಿವಂ ದುಬೆ ಭಾರತ ತಂಡದಲ್ಲಿ 18 ಟಿ20 ಪಂದ್ಯದಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 1 ಅರ್ಧಶತಕದೊಂದಿಗೆ 152 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ 9 ಬೌಂಡರಿ, 9 ಸಿಕ್ಸ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ 6 ವಿಕೆಟ್ ಕಿತ್ತಿದ್ದಾರೆ.