ಹೊಸ ಜರ್ಸಿಯಲ್ಲಿ ಟೀಂ​ ಇಂಡಿಯಾ ಆಟಗಾರರ ಫೋಟೋಶೂಟ್‌:ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌

ಲಂಡನ್: ಲಂಡನ್​ನ ಓವೆಲ್​ನಲ್ಲಿ ಜೂನ್ 7 ರಿಂದ 11 ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ​ಫೈನಲ್ ನಡೆಯಲಿದೆ . ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡೆಸುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದೆ.

ಭಾರತ ತಂಡದ ಆಟಗಾರರು ಈ ಜರ್ಸಿಯಲ್ಲಿ ಕ್ಯಾಮರಾಗೆ ಫೋಸ್​ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ​, ರೋಹಿತ್​ ಶರ್ಮಾ, ಶುಭಮನ್ ಗಿಲ್​, ಆರ್.ಅಶ್ವಿನ್​, ರವೀಂದ್ರ ಜಡೇಜಾ ಮತ್ತು ಇತರ ಆಟಗಾರರ ಫೋಟೋಗಳನ್ನು ಬಿಸಿಸಿಐ ಮತ್ತು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಇತ್ತೀಚೆಗೆ ಅಡಿಡಾಸ್ ಕಿಟ್​ ಪ್ರಾಯೋಜಕ್ವ ವಹಿಸಿಕೊಂಡಿತ್ತು. ಮೂರು ಮಾದರಿಯ ಕ್ರಿಕೆಟ್​ಗೆ ಹೊಸ ಜರ್ಸಿ ಸಿದ್ಧಪಡಿಸಲಾಗಿದೆ. ಟೆಸ್ಟ್​​ಗೆ ಸಾಂಪ್ರದಾಯಿಕ ಬಳಿ ಮತ್ತು ಏಕದಿನಕ್ಕೆ ನೀಲಿ ಬಣ್ಣದ ಡ್ರೆಸ್​ನಲ್ಲಿ ತಂಡ ಆಡಲಿದೆ.
ಕಿಶನ್​, ಗಿಲ್​ಗೆ 11ರಲ್ಲಿ ಸ್ಥಾನ?: ಟೆಸ್ಟ್​ನಲ್ಲಿ ಆರಂಭಿಕರಾಗಿ ಗಿಲ್​ ತಮ್ಮನ್ನು ಈಗಾಗಲೇ ಪ್ರೂವ್​ ಮಾಡಿಕೊಂಡಿದ್ದಾರೆ. ಹೀಗಾಗಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.

ಈ ವರ್ಷ ಗಿಲ್​ ಗೋಲ್ಡನ್​ ಫಾರ್ಮ್​ನಲ್ಲಿದ್ದಾರೆ. ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಬ್ಯಾಟರ್​ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮುನ್ನ ಭಾರತದಲ್ಲಿ ನಡೆದ ಕ್ರಿಕೆಟ್ ಸರಣಿಗಳಲ್ಲೂ ಉತ್ತಮ ಲಯದಲ್ಲಿ ಬ್ಯಾಟ್​ ಬೀಸಿದ್ದರು. ಈ ವರ್ಷದ ಆರಂಭದಲ್ಲೇ ಶತಕ, ದ್ವಿಶತಕ ಸಾಧನೆ ತೋರಿದ್ದರು.

ಇದಕ್ಕೂ ಮುನ್ನ ಭಾರತದ ಆಟಗಾರರು ಹೊಸ ಜರ್ಸಿಯಲ್ಲಿ ಫೊಟೋಶೂಟ್​ ನಡೆಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿತ್ರಗಳನ್ನು ತನ್ನ ಟ್ವಿಟರ್​ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದೆ. ಮಹತ್ವದ ಪಂದ್ಯಕ್ಕೂ ಮುನ್ನ ಆಟಗಾರರಿಗೆ ಅಡಿಡಾಸ್​ ಸಂಸ್ಥೆ ಹೊಸ ಜರ್ಸಿ ಕಿಟ್​ಗಳನ್ನು ಒದಗಿಸಿದೆ.

ಭಾರತ ತಂಡದಲ್ಲಿ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ತಂಡಕ್ಕೆ ಪಾದಾರ್ಪಣೆ ಮಾಡಿದ ಶ್ರೀಕರ್​ ಭರತ್​ ಬ್ಯಾಟಿಂಗ್​ನಲ್ಲಿ ಮಿಂಚಿಲ್ಲ. ಗ್ಲೌಸ್​ ತೊಟ್ಟು ತಮ್ಮ ಕೆಲಸವನ್ನು ಉತ್ತಮವಾಗಿಯೇ ನಿಭಾಯಿಸಿದ್ದಾರೆ. ಹೀಗಾಗಿ ಇಶಾನ್​ ಕಿಶನ್​ಗೆ ತಂಡದಲ್ಲಿ ಆಡುವ ಅವಕಾಶ ಕಡಿಮೆ ಇದೆ.

ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿರುವ ಭರತ್​ 6 ಇನಿಂಗ್ಸ್​ನಲ್ಲಿ 20.22 ರ ಸರಾಸರಿಯಲ್ಲಿ 101 ರನ್​ ಗಳಿಸಿದ್ದಾರೆ. ಆದರೆ ಒಂದು ಅರ್ಧಶತಕವೂ ಅವರ ಬ್ಯಾಟ್​ನಿಂದ ದಾಖಲಾಗಿಲ್ಲ.
ಸಂಭಾವ್ಯ 11 ಆಟಗಾರರ ಭಾರತ ತಂಡ: ರೋಹಿತ್​ ಶರ್ಮಾ (ನಾಯಕ), ಶುಭಮನ್​ ಗಿಲ್​, ಚೇತೇಶ್ವರ ಪೂಜಾರ, ವಿರಾಟ್​ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಶ್ರೀಕರ್​ ಭರತ್​ (ವಿಕೆಟ್​ ಕೀಪರ್​), ಶಾರ್ದೂಲ್​ ಠಾಕೂರ್​, ಆರ್​.ಅಶ್ವಿನ್​/ ಉಮೇಶ್​ ಯಾದವ್​, ಮೊಹಮ್ಮದ್​ ಶಮಿ , ಮೊಹಮ್ಮದ್​ ಸಿರಾಜ್​.

18 ತಿಂಗಳ ನಂತರ ಮತ್ತೆ ಟೆಸ್ಟ್​ಗೆ ಮರಳಿರುವ ರಹಾನೆಗೆ ಸ್ಥಾನ ಪಕ್ಕಾ ಆಗಿದೆ. ಅಲ್ಲದೇ ಚೇತೇಶ್ವರ ಪೂಜಾರ ಸಹ ಕೌಂಟಿ ಕ್ರಿಕೆಟ್​ನಲ್ಲಿ ಶತಕಗಳನ್ನು ಗಳಿಸಿ ಇಂಗ್ಲೆಂಡ್​ ಹವಾಮಾನಕ್ಕೆ ಹೊಂದಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪೂಜಾರ ಒಳ್ಳೆಯ ರೆಕಾರ್ಡ್​ ಹೊಂದಿದ್ದಾರೆ.

ರವೀಂದ್ರ ಜಡೇಜಾ ಸ್ಪಿನ್​ ಅಲ್​ರೌಂಡರ್​ ಆಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾರ್ದೂಲ್​ ಠಾಕೂರ್​ ವೇಗದ ಬೌಲಿಂಗ್​ ವಿಭಾಗದ ಆಲ್​ರೌಂಡರ್​ ಆಗಿ ಆಡುವ ಸಾಧ್ಯತೆ ಇದೆ. ಅಶ್ವಿನ್​ಗೆ ಹನ್ನೊಂದರ ಬಳಗದಲ್ಲಿ ಅವಕಾಶ ಕಡಿಮೆ ಇದೆ.

ಮೂವರು ವೇಗದ ಬೌಲರ್​ಗಳನ್ನು ಆಡಿಸಿದಲ್ಲಿ ಶಾರ್ದೂಲ್​ ಇರುವುದರಿಂದ ಉಮೇಶ್​ ಹೊರಗಿಟ್ಟು ಅವಳಿ ಸ್ಪಿನ್ನರ್​ ಆಡಿಸಿದರೆ ಅಶ್ವಿನ್ ಆಡುವರು ಎಂದು ಹೇಳಲಾಗುತ್ತಿದೆ.