ಕುಂದಾಪುರ: ಎಕ್ಸಲೆಂಟ್ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ಕುಂದಾಪುರ: ಇಲ್ಲಿನ ಎಕ್ಸಲೆಂಟ್ ಪಿ.ಯು ಕಾಲೇಜು ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಪರೀಕ್ಷಾ ಸಿದ್ಧತೆಯ ಉಪನ್ಯಾಸ ಕಾರ್ಯಾಗಾರವು ನವೆಂಬರ್ 8 ರಂದು ನಡೆಯಿತು.

ಈ ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ ಉಪನ್ಯಾಸಕ ಸತೀಶ ಆರ್ ಮೈಸೂರು ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಇಂದಿನ ಯುವಕರೇ ನಾಳಿನ ನೇತಾರರು. ನೀವು ಈ ದೇಶವನ್ನು ಮುನ್ನೆಡೆಸಿ ರಕ್ಷಿಸುವವರು. ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ ಎಂಬ ಸತ್ಯವನ್ನು ವಿದ್ಯಾರ್ಥಿಗಳು ಅರಿಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಪೂರ್ವ ಜ್ಞಾನವನ್ನು ಪಡೆಯಬಲ್ಲ ಅಪಾರ ಶಕ್ತಿ ಅಡಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಶಿಸ್ತುಬದ್ಧ ಯೋಗಾಸನಗಳು ನರಮಂಡಲವನ್ನು ಬಲಗೊಳಿಸುವುದಲ್ಲದೆ, ಬುದ್ದಿಯನ್ನು ಚುರುಕಾಗಿಸುತ್ತದೆ ಮತ್ತು ಏಕಾಗ್ರತೆಗೆ ಬಹಳ ಸಹಕಾರಿಯಾಗುತ್ತದೆ. ನಮ್ಮ ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ವ್ಯವಸ್ಥಿತವಾಗಿ ಮಾಡಬೇಕೆಂದರು.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದೊಂದಿಗೆ ಮಾನಸಿಕವಾಗಿ ಕಲಿಕೆಯಲ್ಲಿ ಸಧೃಢರಾಗಬೇಕು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಆಗಾಗ ನಡೆಸುವುದಾಗಿ ಹೇಳಿದರು.

ವೇದಿಕೆಯಲ್ಲಿ ಎಕ್ಸಲೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುರೇಖಾ ಆಚಾರ್ಯ ಉಪಸ್ಥಿತರಿದ್ದರು.

ಆಂಗ್ಲ ಭಾಷೆಯ ಉಪನ್ಯಾಸಕ ಪ್ರಕಾಶ್ ಆಚಾರ್ಯರವರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.