ನಿಟ್ಟೆ: ಸೆಲ್ಫಿ ತೆಗೆಯಲು ಹೋಗಿ ನಿಟ್ಟೆ ಅರ್ಬಿಫಾಲ್ಸ್‌ನಲ್ಲಿ ಕೊಚ್ಚಿ ಹೋದ ಯುವಕ

ಕಾರ್ಕಳ: ಇಲ್ಲಿನ ನಿಟ್ಟೆ ಅರ್ಬಿಫಾಲ್ಸ್‌ನಲ್ಲಿ  ಸೆಲ್ಫಿ ತೆಗೆಯಲು ಹೋದ ಯುವಕನೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಗುರುವಾರ ನಡೆದಿದೆ. ಬೋಳ ಕೃಷ್ಣಮೂಲ್ಯರ ಮಗ ಎಲೆಕ್ಟ್ರೀಷಿಯನ್‌ ಸುದೇಶ್‌ ಬೊಳ (19) ನೀರು ಪಾಲಾದ ಯುವಕ.

ಏನಾಗಿತ್ತು?

ನಿಟ್ಟೆ ಅರ್ಬಿ ಫಾಲ್ಸ್ ಗೆ ಗುರುವಾರ ನಾಲ್ವರು ಗೆಳೆಯರು ತೆರಳಿ ಮೈಮರೆತು  ಜಲಪಾತದ ಬದಿಯಲ್ಲಿ ನಿಂತು ಸೆಲ್ಫಿ  ಕ್ಲಿಕ್ಕಿಸುವ ವೇಳೆ ಈ ಘಟನೆ ಸಂಭವಿಸಿದೆ.  ನಾಲ್ವರು ಗೆಳೆಯರ ಪೈಕಿ ಸುದೇಶ್‌ ಹಾಗೂ ಭರತ್‌ ಕಾಲು ಜಾರಿ ಜಲಪಾತಕ್ಕೆ  ಬಿದ್ದಿದ್ದಾರೆ. ಆದರೆ ಭರತ್‌ ಈಜು ಗೊತ್ತಿದ್ದರಿಂದ ದಡ ಸೇರಿದ್ದಾರೆ. ಆದರೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಭರತ್ ನನ್ನು ರಕ್ಷಿಸಲು ಮುಂದಾದರೂ ನೀರಿ ರಭಸಕ್ಕೆ ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಶವಕ್ಕಾಗಿ ಹುಡುಕಾಟ:

ಗುರುವಾರ ಮಧ್ಯಾಹ್ನ 2:30ರ ವೇಳೆ ಘಟನೆ ನಡೆದಿದ್ದರೂ ಈ ವರೆಗೆ  ಸುದೇಶ್‌ ಶವ ಪತ್ತೆಯಾಗಿಲ್ಲ. ಪೊಲೀಸ್‌ ಇಲಾಖೆ, ಅಗ್ನಿ ಶಾಮಕ ದಳದವರು ಸುದೇಶ್‌ ಪತ್ತೆಗಾಗಿ ಸತತ ಪ್ರಯತ್ನ ನಡೆಸುತ್ತಿದ್ದಾರೆ.

ಸ್ಥಳದಲ್ಲಿ ಕಾರ್ಕಳ ಗ್ರಾಮಾಂತರ ಎಸ್‌ಐ ನಾಸಿರ್‌ ಹುಸೇನ್‌, ತಹಶೀಲ್ದಾರ್‌ ಪುರಂದರ ಹೆಗ್ಡೆ, ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಡಾ| ಮೇ| ಹರ್ಷ ಕೆ.ಬಿ., ನಿಟ್ಟೆ ಗ್ರಾಮ ಪಂಚಾಯತ್‌ ಪಿಡಿಒ ಸುಧಾಕರ್‌ ಶೆಟ್ಟಿ, ಗ್ರಾಮ ಕರಣಿಕ ಆನಂದ್‌ ಸ್ಥಳಕ್ಕೆ ಭೇಟಿ ನೀಡಿ ಘಟನೆ ವಿವರ ಪಡೆದುಕೊಂಡು ಕಾರ್ಯಾಚರಣೆಗೆ ವೇಗ ನೀಡಿದ್ದಾರೆ.