ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ:ನಾಳೆ (ಜು.13) ನಗಾರಿ ಗೋಪುರದ ಶಿಲಾನ್ಯಾಸ ಸಮಾರಂಭ

ಹೆಬ್ರಿ: ಇತಿಹಾಸ ಪ್ರಸಿದ್ಧ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮೊದಲ ಹಂತದ ಜೀರ್ಣೋದ್ದಾರದ ಪ್ರಯುಕ್ತ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ದೇವಳದ ನಗಾರಿ ಗೋಪುರದ ಶಿಲಾನ್ಯಾಸ ಸಮಾರಂಭ ಜು.13ರಂದು ಬೆಳಗ್ಗೆ 9 ರಿಂದ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಸರದಿ ಅರ್ಚಕರಾದ ಪಿ. ಸುಧಾಕರ ಅಡಿಗರ ಉಪಸ್ಥಿತಿಯಲ್ಲಿ ನಡೆಯಲಿದೆ.

ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ದಾರು ಮುಹೂರ್ತ, ಶಿಲಾ ಮುಹೂರ್ತ, ಭುವನೇಶ್ವರೀ ಪೂಜೆ, ನಗಾರಿ ಗೋಪುರದ ಶಿಲಾ ಪ್ರತಿಷ್ಠಾಪನೆ, ಶ್ರೀ ದೇವರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಜೀರ್ಣೋದ್ದಾರದ ಪ್ರಯುಕ್ತ ಶ್ರೀ ದೇವರ ಅನಂತ ದೀಕ್ಷಾ ವಿಧಿ ನಡೆಯಲಿದ್ದು, ಭಕ್ತಾದಿಗಳು ದೀಕ್ಷಾ ವಿಧಿ ಪಡೆದು ದಿನ ನಿತ್ಯ ಶ್ರೀ ದೇವರ ಮಂತ್ರ ಜಪವನ್ನು ನಡೆಸಲು ಅವಕಾಶವಿದೆ.

ಮುಜರಾಯಿ ಸಚಿವರಿಂದ ಶಿಲಾನ್ಯಾಸ:

ನೂತನವಾಗಿ ನಿರ್ಮಾಣಗೊಳ್ಳಲಿರುವ ನಗಾರಿಗೋಪುರವು ಹಳೆಯ ರೂಪುರೇಷೆಯಂತೆಯೇ ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಪಾರಂಪರಿಕ ವಾಸ್ತುವಿಗೆ ಅನುಗುಣವಾಗಿರಲಿದೆ. ಇದರ ಶಿಲನ್ಯಾಸವನ್ನು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೆರವೇರಿಸುವರು. ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ಶುಭಾಶಂಸನೆಗೈಯಲಿದ್ದು ಅಧ್ಯಕ್ಷತೆ ಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ ವಹಿಸುವರು. ಮಾಹೆಯ ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುರೇಶ ಶೆಟ್ಟಿ ಗುರ್ಮೆ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೆ. ಜಯಪ್ರಕಾಶ ಹೆಗ್ಡೆ,ಅದಾನಿ ಗ್ರೂಪ್‌ನ ಅಧ್ಯಕ್ಷ ಕಿಶೋ‌ರ್ ಆಳ್ವ ಪೆರ್ಡೂರು ಮಾಜಿ ಮಂಡಲ ಪ್ರಧಾನ ಶಾಂತಾರಾಮ ಸೂಡ ಕೆ.,ರಾಜ್ಯ ಧಾರ್ಮಿಕ ಪರಿಷತ್‌ನ ವಿಶೇಷ ಆಹ್ವಾನಿತ ರವಿಶಂಕರ ಶೆಟ್ಟಿ, ಸದಸ್ಯೆ ಮಲ್ಲಿಕಾ ಪಕ್ಕಳ, ವಿದ್ವಾನ್ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ದೇವಳದ ಅರ್ಚಕ ರಘುಪ್ರಸಾದ ಅಡಿಗ ಮೊದಲಾದವರು ಭಾಗವಹಿಸುವರು. ಬೆಳಗ್ಗೆ 11 ಗಂಟೆಯಿಂದ ಪೆರ್ಡೂರು ಮೇಳದ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಬಳಗದವರಿಂದ ಯಕ್ಷಗಾನವೈಭವ ನಡೆಯಲಿದೆ.