ಪೇಜಾವರ ಶ್ರೀಪಾದರ ಬಗ್ಗೆ ಅಮೀನ್ ಮಟ್ಟು ಹೇಳಿಕೆ ಖಂಡನೀಯ :ಕೋಟ

ಉಡುಪಿ: ಪೇಜಾವರ ಶ್ರೀಪಾದರ ಬಗ್ಗೆ ಚಿಂತಕ ದಿನೇಶ್ ಅಮೀನ್ ಮಟ್ಟು ಆಡಿದ ಅವಹೇಳನಕಾರಿ ಮಾತಿನಿಂದ ಸಮಸ್ತ ಹಿಂದೂ ಧರ್ಮಕ್ಕೆ ನೋವಾಗಿದೆ. ಮಟ್ಟು ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಚಿಂತಕ ದಿನೇಶ್ ಅಮೀನ್ ಮಟ್ಟು ‘ಪೇಜಾವರ ಶ್ರೀಗಳಿಗೆ ಅರಳುಮರಳು’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಂಡನೆ ವ್ಯಕ್ತಪಡಿಸಿದ ಕೋಟ, ಅಖಂಡ ಹಿಂದೂ ಧರ್ಮದ ಶ್ರೇಷ್ಠ ಸಂನ್ಯಾಸಿ ಪೇಜಾವರ ಶ್ರೀಗಳು. ಅವರು ಸಂನ್ಯಾಸಿ ದೀಕ್ಷೆ ಸ್ವೀಕರಿಸಿ 80 ವರ್ಷಗಳು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಸ್ವತಃ ದೇಶದ ರಾಷ್ಟ್ರಪತಿಗಳೇ ಉಡುಪಿಗೆ ಬಂದು ಗೌರವಿಸುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ದಿನೇಶ್ ಅಮೀನ್ ಮಟ್ಟು ಅವರು ನೀಡಿರುವ ಹೇಳಿಕೆಯಿಂದ ಇಡೀ ಹಿಂದೂ ಧರ್ಮಕ್ಕೆ ಧಕ್ಕೆಯುಂಟಾಗಿದೆ ಎಂದರು.
ಇಡೀ ದೇಶದ ಪೊಲೀಸ್ ವ್ಯವಸ್ಥೆಯನ್ನು 15 ನಿಮಿಷಗಳ ಕಾಲ ಸ್ಥಗಿತಗೊಳಿಸಿ, ಹಿಂದೂ ಧರ್ಮವನ್ನೇ ನಾಶ ಮಾಡುತ್ತೇನೆಂದು ಹೇಳಿರುವ ಅಸಾವುದ್ದೀನ್ ಓವೈಸಿಯಂತಹವರು ದಿನೇಶ್ ಅಮೀನ್ ಮಟ್ಟು ಅವರಿಗೆ ಬಹಳ ದೊಡ್ಡ ವ್ಯಕ್ತಿಯಾಗಿ ಕಾಣುತ್ತಿರಬೇಕು. ಹಾಗಾಗಿ ಮಟ್ಟು ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ಕೋಟ ಟೀಕಿಸಿದರು.