ಪಟಾಕಿ ಸಿಡಿಸಿ ಅಕ್ರಮ ಗೋ ಮಾರಾಟಗಾರರ ಸಂಭ್ರಮ, ಹಿಂದೂ‌ ಸಂಘಟನೆಗಳ ಆಕ್ರೋಶ

ಮಂಗಳೂರು: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ 24 ಗೋವುಗಳನ್ನು ಮಂಗಳೂರಿನ ಪಣಂಬೂರು ಪೊಲೀಸರು ರಕ್ಷಣೆ ಮಾಡಿದ್ದರು. ಆದರೆ ಅದೇ ಗೋವುಗಳನ್ನು ಸುಳ್ಳು ದಾಖಲೆ ಸೃಷ್ಟಿಮಾಡಿ ಕೋರ್ಟ್ ಮೂಲಕ ಬಿಡಿಸಿಕೊಂಡು ಪಟಾಕಿ ಸಿಡಿಸಿ ವಿಜಯೋತ್ಸವದ ಮೂಲಕ ತೆಗೆದುಕೊಂಡು ಹೋದ ಗೋಹಂತಕರ ಕೃತ್ಯವನ್ನು ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ಖಂಡಿಸಿದೆ.
ಜತೆಗೆ ಪೊಲೀಸ್ ಇಲಾಖೆಯ ವಿರುದ್ಧ ನಡೆಸಿದ ವಿಜಯೋತ್ಸವವನ್ನು ತೀವ್ರವಾಗಿ ಖಂಡಿಸಿ ಕೋಮುಗಲಭೆಗೆ ಪ್ರಚೋದನೆ ನೀಡುವ ಇಂತಹ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರಗಿಸಲು ಆಗ್ರಹಿಸಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ವೇಳೆ ಉಭಯ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.