ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರ ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ

ಉಡುಪಿ: ವಿಶ್ವ ಪ್ರಸಿದ್ದ ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಅಧಿಕೃತ ಪುಣ್ಯಕ್ಷೇತ್ರವೆಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಅತಿ ವಂದನೀಯ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋರವರು ಆಗಸ್ಟ್ 15 ರಂದು ವಿದ್ಯುಕ್ತವಾಗಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಘೋಷಿಸಿದರು. ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳಾದ ಫಾದರ್ ಸ್ಟ್ಯಾನಿ ಬಿ ಲೋಬೋ ಅವರು ಪುಣ್ಯಕ್ಷೇತ್ರದ ಘೋಷಣೆ ಪತ್ರವನ್ನು ವಾಚಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋ ರವರು ದಿವ್ಯ ಬಲಿಪೂಜೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಬಲಿಪೂಜೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ಫ್ರಾನ್ಸಿಸ್ ಸೆರಾವೋ, ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ಹೆನ್ರಿ ಡಿಸೋಜ, ಕಲ್ಬುರ್ಗಿ
ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ರಾಬರ್ಟ್ ಮಿರಾಂದಾ, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಲಾರೆನ್ಸ್ ಮುಕ್ಕುಜಿ, ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಾಯಿಲ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಸ್ಟಾನಿ ಬಿ ಲೋಬೋ, ಫಾದರ್ ಚಾರ್ಲ್ಸ್ ಮೆನೇಜಸ್, ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರುಗಳಾದ ಫಾದರ್. ಮೆಲ್ವಿಲ್ ರೊಯ್ ಲೋಬೋ, ಮತ್ತು ಧರ್ಮಪ್ರಾಂತ್ಯದ ಇತರ ಧರ್ಮಗುರುಗಳು ಕಲ್ಮಾಡಿಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದೇ ಸಂದರ್ಭದಲ್ಲಿ ಸ್ಟೆಲ್ಲಾ ಮಾರಿಸ್ ದೇವಾಲಯದ ಸುವರ್ಣ ಮಹೋತ್ಸವದ ಸನ್ಮಾನ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಹಾಗೂ ಕಳೆದ 50 ವರ್ಷಗಳಲ್ಲಿ ಸೇವೆ ಸಲ್ಲಿಸಿದ ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ವಾರ್ಡಿನ ಗುರಿಕಾರರನ್ನು ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವದ ಶಾಶ್ವತ ಯೋಜನೆಯಾದ ಆರೋಗ್ಯ ನಿಧಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋ ಚಾಲನೆ ನೀಡಿದರು. ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾಕ್ಟರ್ ಪೀಟರ್ ಪೌಲ್ ಸಲ್ಡಾನ ಬಿಡುಗಡೆಗೊಳಿಸಿದರು.

ಪ್ರಧಾನ ಧರ್ಮಗುರುಗಳಾದ ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್ ಸ್ವಾಗತಿಸಿ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ ವಂದಿಸಿದರು. ಹೆನ್ರಿ ಪೂರ್ಟಾಡೋ ಮತ್ತು ಜೆನವಿವ್ ಲೋಬೋ ಕಾರ್ಯಕ್ರಮ ನಿರ್ವಹಿಸಿದರು.

ಪಾಲನಾ ಮಂಡಳಿ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋಸ, 20 ಆಯೋಗದ ಸಂಯೋಜಕಿ ಐಡಾ ಡಿಸೋಜಾ, ಸುವರ್ಣ ಮಹೋತ್ಸವ ಸಮಿತಿಯ ಸಂಯೋಜಕ ಸಂದೀಪ್ ಅಂದ್ರಾದೆ ಪಾಲನಾ ಮಂಡಳಿಯ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.