ಮರವಂತೆ: ಚಲಿಸುತ್ತಿದ್ದ ಕಾರು ಸಮುದ್ರ ಪಾಲು; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ

ಮರವಂತೆ: ಚಲಿಸುತ್ತಿದ್ದ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ‌ ಓರ್ವ ಮೃತಪಟ್ಟು, ಇನ್ನೋರ್ವ ನಾಪತ್ತೆಯಾಗಿರುವ ಘಟನೆ ಮರವಂತೆ ಬೀಚ್ ನ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.

ಮೃತರನ್ನು ಬೀಜಾಡಿಯ ಗೋಳಿಬೆಟ್ಟು ನಿವಾಸಿ, ವಿಲಾಸ್ ಮಾರ್ಬಲ್ ನ ಮಾಲೀಕ ರಮೇಶ್ ಆಚಾರ್ ನೇರಂಬಳ್ಳಿಯವರ ಪುತ್ರ ವಿರಾಜ್ ಆಚಾರ್ಯ(28) ಎಂದು ಗುರುತಿಸಲಾಗಿದೆ. ಸಹೋದರ ಸಂಬಂಧಿಗಳಾದ ರೋಶನ್‌ ನಾಪತ್ತೆಯಾಗಿದ್ದು, ಸಂದೇಶ್, ಕಾರ್ತಿಕ್ ಅವರನ್ನು ರಕ್ಷಿಸಲಾಗಿದೆ.

ರೋಶನ್ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆಂದು ಶಂಕಿಸಲಾಗಿದೆ. ಸಂದೇಶ್ ಹಾಗೂ ಕಾರ್ತಿಕ್ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ತಡರಾತ್ರಿ ಸುಮಾರು 12:30 ರಿಂದ. 1 ಗಂಟೆಯ ವೇಳೆಗೆ ಕುಂದಾಪುರದಿಂದ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ವಿರಾಜ್ ಹಾಗೂ ಅವರ ಸಹೋದರ ಸಂಬಂಧಿಗಳು ಕುಂದಾಪುರ ಕಡೆಯಿಂದ ಬೈಂದೂರು‌ ಕಡೆಗೆ ಪ್ರಯಾಣಿಸುತ್ತಿದ್ದರು. ವಿರಾಜ್ ಸ್ವತಃ ಕಾರನ್ನು ಚಾಲನೆ‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.