ಪಾದಚಾರಿಗಳಿಗೆ ಕಾರು ಡಿಕ್ಕಿ: ಹಲವರಿಗೆ ಗಾಯ; ಓರ್ವ ಮೃತ್ಯುವಶ

ಮಣಿಪಾಲ: ಇಲ್ಲಿನ ಸೆಂಟ್ರಲ್ ಪಾರ್ಕ್ ಹೋಟೇಲ್ ಇಳಿಜಾರು ರಸ್ತೆಯಲ್ಲಿ ತಡರಾತ್ರಿ ಅತಿ ವೇಗದಿಂದ ಬಂದ ಕಾರೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಹಲವರು ಗಾಯಗೊಂಡಿದ್ದು, ಓರ್ವ ಯುವಕ ಮೃತನಾಗಿದ್ದಾನೆ.

ಇಲ್ಲಿನ ಐನಾಕ್ಸ್ ಚಿತ್ರಮಂದಿರದ ಹತ್ತಿರ ಹೋಟೇಲ್ ಒಂದರಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಪಶ್ಚಿಮ ಬಂಗಾಲದ ನಿವಾಸಿ ಸಾಹಿನ್ ಎಸ್.ಕೆ(18) ಮೃತಪಟ್ಟ ಯುವಕ. ಇನ್ನುಳಿದ ಇತರ ಪಾದಾಚಾರಿಗಳಾದ ಸುಮಿತ್ ಜಸ್ವಾಲ್, ಸಂಸುಲ್ ಆರೀಫ್ ಹೋಕ್ಯೂ, ಲತೀಫುಲ್ ಚೌಧರಿ, ಸುಕ್ದೇಬ್ ಕರ್ಮರ್ಕರ್ ಇವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಎಲ್ಲರಿಗೂ ಗಾಯಗಳಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಲ್ಲಿ ಸಾಹಿನ್ ಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಡಿಕ್ಕಿ ಸಂದರ್ಭ ಪೆರ್ಡೂರಿನ ಸಂತೋಷ್ ಕುಲಾಲ್ ಅವರ ಆಟೋಗೂ ಹಾನಿಯಾಗಿದೆ. ಕಾರಿನ ಚಾಲಕ ದೀಕ್ಷಿತ್ ರಾಜ್ ಪರಾರಿಯಾಗಿದ್ದು, ರವಿವಾರದಂದು ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.