ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ: ಕಾರಾಗೃಹ ಸಿಬ್ಬಂದಿಯ ನೌಕರಿಗೆ ಕುತ್ತು

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ದೊರೆಯುತ್ತಿರುವ ಬಗ್ಗೆ ವರದಿ ಬಂದ ಮೇಲೆ ರಾಜ್ಯಾದ್ಯಂತ ಈ ಬಗ್ಗೆ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತ ಸರಕಾರ ಇನ್ನು ಮುಂದೆ ಕೈದಿಗಳಿಗೆ ಡ್ರಗ್ಸ್, ಮದ್ಯ, ಮೊಬೈಲ್ ಮುಂತಾದ ವಸ್ತುಗಳನ್ನು ಪೂರೈಸುವ ಕಾರಾಗೃಹ ಸಿಬ್ಬಂದಿಗಳನ್ನು ಸೇವೆಯಿಂದಲೇ ವಜಾ ಮಾಡಲು ಮುಂದಾಗಿದೆ.

ಕಾರಾಗೃಹದ ನೂತನ ಮುಖ್ಯ ಅಧೀಕ್ಷಕ ಪಿ.ಎಸ್‌.ರಮೇಶ್‌ ಇನ್ನು ಮುಂದೆ ಜೈಲಿನ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡದೆ, ನೇರವಾಗಿ ಸೇವೆಯಿಂದಲೇ ವಜಾಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಡಿಜಿಪಿ ಮುರುಗನ್‌ ನೇತೃತ್ವದಲ್ಲಿ ವಿಚಾರಣಾ ಸಮಿತಿ ನೇಮಿಸಿತ್ತು. ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದ ಸಮಿತಿ, ಕಾರಾಗೃಹದಲ್ಲಿ ಕೈದಿಗಳ ಅಕ್ರಮ ಚಟುವಟಿಕೆಗಳಿಗೆ ಕೆಲ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈ ಜೋಡಿಸಿರುವುದನ್ನು ಪತ್ತೆ ಹಚ್ಚಿ ಕಾರಾಗೃಹ ಸುಧಾರಣೆಗೆ ಹಲವು ಶಿಫಾರಸು ಮಾಡಿತ್ತು. ಈ ಪೈಕಿ ಕೈದಿಗಳ ಅಕ್ರಮ ಕೂಟಕ್ಕೆ ಜೊತೆ ನೀಡಿದ್ದ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸಿನಲ್ಲಿ ಸೂಚಿಸಿತ್ತು.