ಗೋವು ಸಾಕಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಕಡ್ಡಾಯ ಆದೇಶ ಹಿಂಪಡೆಯಿರಿ: ಯಶ್‍ಪಾಲ್ ಸುವರ್ಣ ಆಗ್ರಹ

ಉಡುಪಿ: ರಾಜ್ಯದಲ್ಲಿ ಗೋಶಾಲೆ, ಡೇರಿ ಫಾರಂ ಹಾಗೂ ಹೈನುಗಾರಿಕಗೆ ದನಗಳನ್ನು ಸಾಕಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸಿ ರಾಜ್ಯ ಸರಕಾರ ಕೂಡಲೇ ಹಿಂಪಡೆಯಬೇಕು ಎಂದು ದ.ಕ. ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಗೋ ಮಾತೆಯಾಗಿ ಶ್ರದ್ಧಾ ಭಕ್ತಿಯಿಂದ ಸಾಕುವ ಗೋವುಗಳಿಗೆ ಭಾರತದ ಸಂಸ್ಕೃತಿಯಲ್ಲಿ ಪ್ರಧಾನ ಪಾತ್ರವಿದೆ. ಗೋವುಗಳು ಕೃಷಿ ಪ್ರಧಾನವಾದ ನಮ್ಮ ದೇಶದ ಆರ್ಥಿಕತೆಗೆ ಪೂರಕವಾಗಿ ರೈತರ ಕೃಷಿ ಚಟುವಟಿಕೆ ಹಾಗೂ ಹೈನುಗಾರಿಕೆಯ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗೋವಿನ ಪ್ರತಿಯೊಂದು ಉತ್ಪನ್ನಗಳು ಕೂಡಾ ತನ್ನದೇ ವೈಶಿಷ್ಟ್ಯದಿಂದ ಕೃಷಿ ಚಟುವಟಿಕೆ, ಆಹಾರ, ಆರೋಗ್ಯ ದೃಷ್ಟಿಯಿಂದ ವೈಜ್ಞಾನಿಕವಾಗಿಯೂ ಮಹತ್ವವನ್ನು ಪಡೆದಿದೆ.

ಗೋವಿನ ಮಹತ್ವದ ಬಗ್ಗೆ ಅನುಭವ ಹಾಗೂ ಮಾಹಿತಿಯ ಕೊರತೆಯಿಂದ ಪೂರ್ವಾಗ್ರಹಪೀಡಿತರಾಗಿ ಅಭಿಯಾನÀ ರೂಪಿಸಿ ರಾಷ್ಟ್ರೀಯ ಹಸಿರು ಪೀಠದಲ್ಲಿ ದೂರನ್ನು ದಾಖಲಿಸಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹಸಿರು ಪೀಠ ನೀಡಿರುವ ಆದೇಶದಂತೆ ರಾಜ್ಯ ಸರಕಾರ ಜಾರಿಗೆ ತಂದಿರುವ ಈ ಕಾನೂನು ಹೈನುಗಾರಿಕೆಯನ್ನೇ ನಂಬಿರುವ ರೈತರಲ್ಲಿ ಗೊಂದಲ ಮೂಡಿಸಿದೆ.

ರಾಷ್ಟ್ರೀಯ ಹಸಿರು ಪೀಠ ಈ ಬಗ್ಗೆ ಗೋವುಗಳ ಸಾಕಾಣಿಕೆಯ ಮಹತ್ವವನ್ನು ಪರಿಗಣಿಸಿ ತನ್ನ ಆದೇಶವನ್ನು ಪುನರ್‍ಪರಿಶೀಲಿಸಿ ಗೋ ಸಾಕಾಣೆಗೆ ಪೂರಕ ವಾತಾರವಣ ಕಲ್ಪಿಸಬೇಕಾಗಿದೆ.
ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಲಕ್ಷಾಂತರ ಕುಟುಂಬ ಹಾಗೂ ಯಾವುದೇ ಪ್ರತಿಫಲಪೇಕ್ಷೆಯಿಲ್ಲದೇ ಗೋವುಗಳ ಸೇವೆಯಲ್ಲಿ ಕಾರ್ಯನಿರತವಾಗಿರುವ ಗೋಶಾಲೆಗಳಿಗೆ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ಆದೇಶವನ್ನು ಹಿಂಪಡೆದು ಗೋ ಸಂರಕ್ಷಣೆಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದ್ದಾರೆ.