ಮಂಗಳೂರು: ತಮ್ಮ ‘ಕಾಳೆಂ ಭಾಂಗಾರ್’ ಕಾದಂಬರಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇತ್ತೀಚೆಗಷ್ಟೇ ನಿಧನರಾದ ಹಿರಿಯ ಕೊಂಕಣಿ ಸಾಹಿತಿ ಎಡ್ವಿನ್ ಜೆ. ಎಫ್. ಡಿ’ ಸೊಜಾ ಇವರಿಗೆ ಸಂತ ಎಲೋಶಿಯಸ್ ಕಾಲೇಜು(ಸ್ವಾಯತ್ತ) ಕೊಂಕಣಿ ಸಂಸ್ಥೆಯ ನೇತೃತ್ವದಲ್ಲಿ ಸಾಹಿತ್ಯ ಅಕಾಡೆಮಿ ಹೊಸ ದೆಹಲಿ, ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ, ಮೈಕಲ್ ಡಿ ಸೊಜಾ ವಿಶನ್ ಕೊಂಕಣಿ ಮತ್ತು ರಾಕ್ಣೊ ವಾರಪತ್ರಿಕೆ ಸಹಯೋಗದಲ್ಲಿ ಕೊಂಕಣಿ ಸಂಘಟನೆಗಳ ವತಿಯಿಂದ ನ. 19 ರಂದು ಬೆಳಗ್ಗೆ 10 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ನುಡಿನಮನ ಸಲ್ಲಿಸಲಾಗುವುದು.
ಗೋವಾ ವಿಶ್ವವಿದ್ಯಾಲಯದ ಕೊಂಕಣಿ ವಿಭಾಗ ವಿಶ್ರಾಂತ ಮುಖ್ಯಸ್ಥೆ ಡಾ. ಚಂದ್ರಲೇಖಾ ಡಿ’ಸೊಜಾ ಹಾಗೂ ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ದಾಮೋದರ್ ಮಾವ್ಜೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಕವಿ-ಕಥೆಗಾರ ಕಿಶೂ, ಬಾರ್ಕೂರು ಎಡ್ವಿನ್ ಡಿ ಸೊಜಾ ನುಡಿನಮನ ಸಲ್ಲಿಸಲಿದ್ದಾರೆ.
ಸಂತ ಅಲೋಶಿಯಸ್ ಕಾಲೇಜಿನ, ಕೊಂಕಣಿ ಸಂಸ್ಥೆಯ ಮುಖ್ಯಸ್ಥ ವಂ. ಡಾ. ಮೆಲ್ವಿನ್ ಪಿಂಟೊ, ನೀರುಡೆ ಗೌರವಾರ್ಪಣೆ ಮಾಡಲಿದ್ದಾರೆ.
ಕೊಂಕಣಿ ಸಾಹಿತ್ಯ ಸಂಘಟನೆಗಳು, ಕೊಂಕಣಿ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಎಡ್ವಿನ್ ಜೆ. ಎಫ್. ಡಿ’ಸೊಜಾ ಅವರ ಅಭಿಮಾನಿಗಳಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಲು ಅವಕಾಶವಿದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.












