ಬೈಂದೂರು: ಉದ್ಯೋಗ ಸಿಗಲಿಲ್ಲವೆಂದು ಯುವತಿ ನೇಣಿಗೆ ಶರಣು

ಬೈಂದೂರು: ಉದ್ಯೋಗ ಸಿಗಲಿಲ್ಲವೆಂದು ನಿರಾಸೆಗೊಂಡಿದ್ದ ಯುವತಿಯೊಬ್ಬಳು ಮೇ.೨೭ ರಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೃತಳನ್ನು ಕಲ್ತೋಡು ಗ್ರಾಮದ ಸೀಗೇಡಿ ನಿವಾಸಿ ಪ್ರಮೋದ ಶೆಟ್ಟಿ ಎಂಬವರ ಪುತ್ರಿ ಗೌತಮಿ (22) ಎಂದು ಗುರುತಿಸಲಾಗಿದೆ.

ಉಡುಪಿಯ ಖಾಸಗಿ ಕಾಲೇಜಿನಲ್ಲಿ ಎಂಕಾಂ ಮಾಡಿರುವ ಗೌತಮಿ ಬ್ಯಾಂಕ್ ನೇಮಕಾತಿ ಪರೀಕ್ಷೆ ಹಾಗೂ ಇತರೆ ಕಂಪನಿ ನೇಮಕಾತಿಗೆ ಅರ್ಜಿ ಹಾಕಿದ್ದರೂ ಕೆಲಸ ಸಿಕ್ಕಿರಲಿಲ್ಲ. ಇದರಿಂದ ಹತಾಶಳಾದ ಆಕೆ ತನ್ನ ಮನೆಯ ಮೊದಲನೆ ಮಹಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಯುವತಿಯು ಮೃತ್ಯು ಪತ್ರವನ್ನು ಬರೆದಿಟ್ಟಿದ್ದಾಳೆ.

ಆಕೆಯ ನೇಣಿನ ಕುಣಿಕೆ ತೆಗೆದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದರೂ ಆಕೆಯನ್ನು ಬದುಕಿಸಲಾಗಲಿಲ್ಲ. ವೈದ್ಯರು ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.