ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಎನ್.ಎಚ್.ಎ.ಐ ಒಪ್ಪಿಗೆ: 2 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್‌ ಸಿದ್ದತೆ

ಉಡುಪಿ: ಮಲ್ಪೆ – ತೀರ್ಥಹಳ್ಳಿ (ರಾಷ್ಟ್ರೀಯ ಹೆದ್ದಾರಿ 169ಎ) ಚತುಷ್ಪಥ ಯೋಜನೆ ಪ್ರಗತಿಯಲ್ಲಿದ್ದು, ಆಗುಂಬೆ ಘಾಟಿಯಲ್ಲಿ(Agumbe Ghat) ಪದೇ ಪದೇ ಗುಡ್ಡ ಕುಸಿತ, ತಡೆಗೋಡೆ ಬಿರುಕು ಸಮಸ್ಯೆ ಕಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಯೋಜನೆ ಮತ್ತೆ ಸದ್ದು ಮಾಡತೊಡಗಿದೆ.

ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಇತ್ತೀಚೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕರಾವಳಿ ಮಲೆನಾಡು ಬೆಸೆಯುವ ಸುರಂಗ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಯೋಜನೆಯ ಸಾಧಕ – ಬಾಧಕ ಅರಿಯಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ(NHAI) ಒಪ್ಪಿಗೆ ನೀಡಿದ್ದು, 2 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್‌ ಸಿದ್ಧವಾಗಲಿದೆ.

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಸೋಮೇಶ್ವರದಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಗೆ ಸಂಪರ್ಕಿಸುವ 12 ಕಿ. ಮೀ. ದೂರಕ್ಕೆ 3,500 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ (169ಎ) ಚತುಷ್ಪಥ ಯೋಜನೆಯಡಿ ಸುರಂಗ ನಿರ್ಮಾಣ ಯೋಜನೆ ಸೇರದಿದ್ದರೂ ದ್ವಿಪಥ ರಸ್ತೆ ನಿರ್ಮಾಣದ ಬದಲು ಸುರಂಗ ಯೋಜನೆ ಸೇರಿಸುವ ಸಾಧ್ಯತೆಯಿದೆ.

ಪಶ್ಚಿಮ ಘಟ್ಟ ವ್ಯಾಪ್ತಿಗೆ ಸೇರಿದ ಆಗುಂಬೆ ಪರಿಸರ ಸೂಕ್ಷ್ಮ, ಅಪಾರ ಜೀವ ವೈವಿಧ್ಯವುಳ್ಳ ಪ್ರದೇಶವಾಗಿದೆ. ಸುರಂಗ ಮಾರ್ಗದಿಂದ ಪರಿಸರದ ಮೇಲಾಗುವ ಪರಿಣಾಮದ ಅಧ್ಯಯನವೂ ಆಗಬೇಕಿದೆ. ಜೀವ ವೈವಿಧ್ಯ, ಪರಿಸರಕ್ಕೆ ಧಕ್ಕೆಯಾಗದಂತೆ ಸುರಂಗ ನಿರ್ಮಾಣ ಯೋಜನೆ ಜಾರಿ ಸಾಧ್ಯತೆಯನ್ನು ಡಿಪಿಆರ್‌ ಒಳಗೊಂಡಿದೆ ಎಂದು ವರದಿ ಹೇಳಿದೆ.