ಸೋಲಾರ್ ಉಪಯೋಗದ ಕುರಿತು ಜಾಗೃತಿ ಮೂಡಿಸುವ ಅಗತ್ಯತೆ ಇದೆ:ವಿಶ್ವೇಶತೀರ್ಥ ಸ್ವಾಮೀಜಿ

ಉಡುಪಿ: ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ಸೋಲಾರ್ ಉಪಯೋಗದ ಕುರಿತು ಜಾಗೃತಿ ಮೂಡಿಸುವ ಅಗತ್ಯತೆ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಹೇಳಿದರು.
ಅವರು ಭಾನುವಾರ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್ ಲಿ ಮಂಗಳೂರು, ಅಮಾಸೆಬೈಲು ಗ್ರಾಮಪಂಚಾಯತ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಅಮಾಸೆಬೈಲು ಪ್ರೌಢಶಾಲೆ ಆವರಣದಲ್ಲಿ ಜರುಗಿದ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಸೋಲಾರ್ ದೀಪಗಳ ಕೊಡುಗೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವಿದ್ಯುಚ್ಛಕ್ತಿಯ ಕೊರತೆಯ ಈ ಸಮದಯದಲ್ಲಿ ಪ್ರಾಕೃತಿಕವಾಗಿ ಲಭಿಸುವ ಸೂರ್ಯನ ಬೆಳಕನ್ನು ಸೋಲಾರ್ ಶಕ್ತಿಯ ಮೂಲಕ ಪಡೆಯುವುದರ ಮೂಲಕ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಹೊಸ ಕ್ರಾಂತಿ ನಡೆದಿದ್ದು ಇದರ ಯಶಸ್ಸಿಗೆ ಮೂಲ ಕಾರಣಿಕರ್ತರು ಎಜಿ ಕೊಡ್ಗಿಯವರು. ಅಧಿಕಾರಿಗಳು, ಜನಪ್ರತಿನಿಧಿಗಳು ಮಾಡುವ ಕೆಲಸವನ್ನು ಒರ್ವ ಸಮಾಜಸೇವಕನೂ ಕೂಡ ಮಾಡಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸೇವೆ ಮಾಡಲು ನಮಗೆ ಅಧಿಕಾರವೇ ಬೇಕಿಲ್ಲ ಬದಲಾಗಿ ಕೆಲಸ ಮಾಡುವ ಆಸಕ್ತಿ ಇರಬೇಕು ಎಂದರು.
ಸೆಲ್ಕೋ ಇಂಡಿಯಾ ಸಂಸ್ಥೆಯ ಅಧ್ಯಕ್ಷರಾದ ಹರೀಶ್ ಹಂದೆಯವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಇಂದಿಗೂ ಕೂಡ ವಿಶ್ವದ 128 ಕೋಟಿ ಜನರು ವಿದ್ಯುತ್ ಇಲ್ಲದೆ ಬದುಕಿದ್ದರೆ ದೇಶದ 25 ಕೋಟಿ ಜನರಿಗೆ ವಿದ್ಯುತ್ ವ್ಯವಸ್ಥೆ ತಲುಪಿಲ್ಲ. ಅಂತಹ ಸಂದರ್ಭದಲ್ಲಿ ಸೋಲಾರ್ ವ್ಯವಸ್ಥೆ ಸುಲಭದಲ್ಲಿ ಜನರಿಗೆ ತಲುಪಿಸುವತ್ತ ಸರಕಾರಗಳು, ಸಮಾಜ ಸೇವಾ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕಾಗಿದೆ. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕ್ ಮಂಗಳೂರು ಇದರ ಆಡಳಿತ ನಿರ್ದೇಶಕರು ಹಾಗೂ ಸಿಇಒ ಮಹಾಬಲೇಶ್ವರ ಭಟ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಕರ್ಣಾಟಕ ಬ್ಯಾಂಕ್ ಮಂಗಳೂರು ಇದರ ನಿವೃತ್ತ ಅಧ್ಯಕ್ಷರಾದ ಅನಂತಕೃಷ್ಣ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಎ ಜಿ ಕೊಡ್ಗಿ,   ಶ್ರೀ ಕ್ಷೇತ್ರ ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|ಎಲ್ ಹೆಚ್ಚ ಮಂಜುನಾಥ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶೀಲಾ ಕೆ ಶೆಟ್ಟಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್ ಉಡುಪಿ, ಅಮಾಸೆಬೈಲು ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ತಿಮ್ಮಪ್ಪ, ಅಮಾಸೆಬೈಲು ಗ್ರಾಮಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಾಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ವಲಯಾಧ್ಯಕ್ಷರಾದ  ಅಪ್ಪಣ್ಣ ಹೆಗ್ಡೆ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರವಿರಾಜ್ ಕೊಡವೂರು ಹಾಗೂ ಇತರರು ಉಪಸ್ಥಿತರಿದ್ದರು.