ಠಾಣೆಯಲ್ಲಿಲ್ಲ ಸಿಸಿಟಿವಿ: ಪ್ರಕರಣ ದಾಖಲಿಸಿದ ಸುಪ್ರೀಂ ಕೋರ್ಟ್!

ನವದೆಹಲಿ: ಪೊಲೀಸ್‌ ಠಾಣೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಮಾಡದೇ ಇರುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಗುರುವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಪೊಲೀಸ್‌ ವಶದಲ್ಲಿರುವವರ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನು ಗಮನಿಸಿ ನ್ಯಾಯಾಲಯ ಈ ಪ್ರಕರಣ ದಾಖಲಿಸಿದೆ.

ಕಳೆದ ಎಂಟು–ಒಂಬತ್ತು ತಿಂಗಳಲ್ಲಿ ಪೊಲೀಸರ ವಶದಲ್ಲಿರುವಾಗಲೇ 11 ಮಂದಿ ಮೃತಪಟ್ಟಿದ್ದಾರೆಂದು ಹಿಂದಿ ಪತ್ರಿಕೆಯೊಂದು ವರದಿ ಮಾಡಿತ್ತು. ಬೆನ್ನಲ್ಲೇ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಹಾಗೂ ನ್ಯಾ.ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ಪೀಠವು ಈ ಸ್ವಯಂ ಪ್ರೇರಿತ ದೂರು ದಾಖಲಿಸಲು ಆದೇಶಿಸಿದೆ.

2020ರ ಡಿಸೆಂಬರ್‌ನಲ್ಲೇ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪೊಲೀಸ್‌ ಠಾಣೆಗಳಲ್ಲಿ ಸಿ.ಸಿ.ಟಿ.ವಿಗಳನ್ನು ಅಳವಡಿಸಬೇಕೆಂದು ನ್ಯಾಯಾಲಯ ಆದೇಶಿಸಿತ್ತು.