ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ: ಮಗು ಪಡೆಯಲು ದಂಬಾಲು ಬಿದ್ದ ಜನತೆ!

ಚಾಮರಾಜನಗರ: ಖಾಸಗಿ ಬಸ್ ನಿಲ್ದಾಣದಲ್ಲಿ ನವಜಾತ ಗಂಡು ಮಗುವನ್ನು ಬ್ಯಾಗ್ ನಲ್ಲಿ ಬಿಟ್ಟು ಹೋಗಿರುವ ಮನಕಲಕುವ ಘಟನೆ ಭಾನುವಾರ (ಏಪ್ರಿಲ್ 24) ರಾತ್ರಿ ನಡೆದಿದ್ದು, ಮಗುವನ್ನು ಪಡೆಯಲು ಜನತೆ ದಂಬಾಲು ಬಿದ್ದಿರುವ ಬಗ್ಗೆ ವರದಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು ಏಳು ದಿನಗಳ ಹಿಂದೆ ಜನಿಸಿರುವ ಹಸುಗೂಸೊಂದನ್ನು ಬಿಟ್ಟು ಹೋಗಲಾಗಿದೆ. ಯಾರೂ ಇಲ್ಲದ ಜಾಗದಲ್ಲಿ ಮಗು ಅಳುತ್ತಿದ್ದ ಶಬ್ದ ಕೇಳಿ ಬ್ಯಾಗ್ ಬಳಿ ಬಂದು ನೋಡಿದ ಸಾರ್ವಜನಿಕರಿಗೆ ಬ್ಯಾಗ್ ನೊಳಗೆ ನವಜಾತ ಗಂಡು ಮಗು ಪತ್ತೆಯಾಗಿದೆ.

ಘಟನೆ ಬಗ್ಗೆ ಸಾರ್ವಜನಿಕರು ಹನೂರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಗುವನ್ನು ವಶಕ್ಕೆ ಪಡೆದು ಮಗುವಿನ ಪೋಷಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಅಕ್ಕ ಪಕ್ಕದ ಸಿಸಿಟಿವಿ ಕ್ಯಾಮರಾಗಳ ತುಣುಕುಗಳನ್ನು ಪರಿಶೀಲಿಸುತ್ತಿದ್ದು ನವಜಾತ ಶಿಶುವನ್ನು ಬಿಟ್ಟು ಹೋದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಸ್ ನಿಲ್ದಾಣದಲ್ಲಿ ಬ್ಯಾಗ್ ನಲ್ಲಿ ಸಿಕ್ಕ ಮುದ್ದಾದ ಮಗುವನ್ನು ಸಾಕುವುದಾಗಿ ಹಲವಾರು ಮಂದಿ ಮುಂದೆ ಬರುತ್ತಿದ್ದು, ಈ ಮಗುವನ್ನು ನಮಗೇ ಕೊಡಿ ನಾವು ಸಾಕಿಕೊಳ್ಳುತ್ತೇವೆ ಎಂದು ದುಂಬಾಲು ಬಿದ್ದಿದ್ದಾರೆ.

ಮಾಹಿತಿ ಮತ್ತು ಚಿತ್ರಕೃಪೆ: ಝೀ ಕನ್ನಡ ನ್ಯೂಸ್