ಎನ್ ಸಿಬಿಯಿಂದ ಕಾರ್ಯಾಚರಣೆ: ಮಣಿಪಾಲದಲ್ಲಿ ಡ್ರಗ್ ವ್ಯವಹಾರಕ್ಕಾಗಿ ಕಾಲ್ ಸೆಂಟರ್ ನಡೆಸುತ್ತಿದ್ದ ವ್ಯಕ್ತಿಯ ಬಂಧನ

ಉಡುಪಿ: ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ‘ಆಪರೇಷನ್‌ ಮೆಡ್ ಮ್ಯಾಕ್ಸ್‌’ ಹೆಸರಿನಲ್ಲಿ ಈಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಡ್ರಗ್ಸ್‌ ವ್ಯವಹಾರಕ್ಕಾಗಿ ಮಣಿಪಾಲದಲ್ಲಿ ಕಾಲ್‌ ಸೆಂಟರ್‌ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.ಮಣಿಪಾಲದ ಹಯಗ್ರೀವ ನಗರದಲ್ಲಿ ಕಾಲ್‌ಸೆಂಟರ್‌ ನಡೆಸುತ್ತಿದ್ದ ಸುರೇಶ್‌ ಕುಮಾರ್‌ ಬಂಧಿತ ಆರೋಪಿ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಈ ಕಾಲ್‌ ಸೆಂಟರ್‌ನಲ್ಲಿ ಹತ್ತು ಮಂದಿ ಕೆಲಸ ಮಾಡುತ್ತಿದ್ದು, ಅವರಿಗೆ ಈ ವ್ಯವಹಾರದ ಬಗ್ಗೆ ಮಾಹಿತಿ ಇರಲಿಲ್ಲ. ಇದು ದೆಹಲಿ ಕೇಂದ್ರಿತ ಡ್ರಗ್ಸ್‌ ಜಾಲವಾಗಿದ್ದು, ಇದರ ಗ್ರಾಹಕರು ವಿದೇಶಿಯರಾಗಿದ್ದರು. ಉಡುಪಿ ಜಿಲ್ಲೆಯಲ್ಲಿ ಡ್ರಗ್ಸ್‌ ಮಾರಾಟ ನಡೆದಿಲ್ಲ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಡ್ರಗ್ಸ್‌ ದಂಧೆಗೆ ಸಂಬಂಧಿಸಿ ಮೇ 25ರಂದು ದೆಹಲಿಯಲ್ಲಿ ಇಬ್ಬರು ಬಿ ಫಾರ್ಮಾ ಪದವೀಧರರನ್ನು ಡ್ರಗ್ಸ್‌ ನೊಂದಿಗೆ ಬಂಧಿಸಿ ವಿಚಾರಣೆ ನಡೆಸಿದಾಗ, ಉಡುಪಿಯಲ್ಲಿನ ವ್ಯಕ್ತಿಯ ಮಾಹಿತಿ ಸಿಕ್ಕಿತ್ತು ಎಂದು ಹೇಳಿವೆ.

ಉಡುಪಿಯಲ್ಲಿ ತನಿಖೆ ನಡೆಸಿದಾಗ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಿಗೆ ಡಗ್ಸ್‌ ಸಾಗಣೆಯಾದ ಮಾಹಿತಿ ಲಭಿಸಿದೆ ಎಂದೂ ಮೂಲಗಳು ಮಾಹಿತಿ ನೀಡಿದೆ.