ನವಸುಮ ರಂಗಮಂಚ ಕೊಡವೂರು‌ ತಂಡ ಪ್ರದರ್ಶಿಸಿದ ‘ಅಂಜಲಿ ಭರ್ ಪಾನಿ’ ನಾಟಕಕ್ಕೆ ಪ್ರಥಮ ಪ್ರಶಸ್ತಿ

ಉಡುಪಿ: ನವಸುಮ ರಂಗಮಂಚ ಕೊಡವೂರು ರಂಗ ತಂಡವು ಹಿಮಾಚಲ ಪ್ರದೇಶದ ಶಿಮ್ಲಾದ ಗಯ್ಟಿ ಥಿಯೇಟರ್‌ನಲ್ಲಿ ನಡೆದ 64ನೇ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿದ ‘ಅಂಜಲಿ ಭರ್‌ ಪಾನೀ’ ಹಿಂದಿ ನಾಟಕಕ್ಕೆ ಪ್ರಥಮ ಪ್ರಶಸ್ತಿ ಲಭಿಸಿದ್ದು, ಆ ಮೂಲಕ ರಾಷ್ಟ್ರಮಟ್ಟದ ಹಿಂದಿ ಭಾಷೆಯ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಮೊದಲ ತಂಡ ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದು ನವಸುಮ ರಂಗಮಂಚದ ಅಧ್ಯಕ್ಷ ಬಾಲಕೃಷ್ಣ ಕೊಡವೂರು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 64 ವರ್ಷಗಳಿಂದ ಎಎಐಎ ಸಂಸ್ಥೆಯು ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಗಳನ್ನು ನಡೆಸುತ್ತಾ ಬಂದಿದೆ. ಇದೇ ಮೊದಲ ಬಾರಿಗೆ ರಾಜ್ಯದ ನವಸುಮ ರಂಗಮಂಚ ತಂಡಕ್ಕೆ ಅವಕಾಶ ದೊರೆತಿತ್ತು. ಈ ನಾಟಕ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 34 ನಾಟಕ ತಂಡಗಳು ಭಾಗವಹಿಸಿದ್ದವು. ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲ ತಂಡಗಳು ಹಿಂದಿ ಭಾಷೆಯಲ್ಲಿ ಪರಿಣತಿ ಹೊಂದಿದ್ದವು. ನಮ್ಮ ತಂಡ ಒಂದು ತಿಂಗಳಲ್ಲಿ ಹಿಂದಿ ಭಾಷೆಯಲ್ಲಿ ನಾಟಕವನ್ನು ಅಭ್ಯಾಸ ಮಾಡಿ ಪ್ರದರ್ಶನ ನೀಡಿ ಪ್ರಥಮ
ಬಹುಮಾನ ಪಡೆದಿರುವುದು ಹೆಮ್ಮೆ ಎಂದರು.
ನಾಟಕ ಸ್ಪರ್ಧೆಯಲ್ಲಿ ನವಸುಮ ರಂಗಮಂಚ ತಂಡವು ಅತ್ಯುತ್ತಮ ನಾಟಕ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಉತ್ತಮ ನಟ ಮತ್ತು ನಿರ್ದೇಶನ–ಬಾಲಕೃಷ್ಣ ಕೊಡವೂರು, ಉತ್ತಮ ಬೆಳಕು ಮತ್ತು ರಂಗಸಜ್ಜಿಕೆ–ಜಯಶೇಖರ್‌ ಮಡಪ್ಪಾಡಿ, ಉತ್ತಮ ರಂಗವಿನ್ಯಾಸ ಮತ್ತು ಪ್ರಸಾಧನ–ವಿನೋದ್‌ ಕೊಡವೂರು ಹಾಗೂ ಸುಶಾಂತ್‌, ವೈಶಾಖ್‌ ಮತ್ತು ಚಂದ್ರಾವತಿ ಅವರು ಮೆಚ್ಚುಗೆಯ ನಟ ಪ್ರಶಸ್ತಿ ಪಡೆದುಕೊಂಡರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ವಿನೋದ್‌ ಕಾಂಚನ್‌, ಉಪಾಧ್ಯಕ್ಷ ದಿನೇಶ್‌
ಅಮೀನ್‌, ಸಲಹೆಗಾರ ಸುರೇಶ್‌ ಶೆಟ್ಟಿ, ಹಿರಿಯ ನಟ ಹರಿಪ್ರಸಾದ್‌, ಜಗದೀಶ್‌ ಶೆಟ್ಟಿ,
ಫಾರೂಕ್‌ ಅಹಮ್ಮದ್‌ ಇದ್ದರು.