ಮೀನುಗಾರರ ನಿಯೋಗದಿಂದ ಕೇಂದ್ರ ರಕ್ಷಣಾ ಸಚಿವರ ಭೇಟಿ: ನಾಪತ್ತೆಯಾಗಿರುವ ಮೀನುಗಾರರ ರಕ್ಷಣೆಗೆ ಆಗ್ರಹ

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಹಾಗೂ 7 ಮಂದಿ ಮೀನುಗಾರರ ನಾಪತ್ತೆ ಪ್ರಕರಣದ ಶೀಘ್ರ ತನಿಖೆ ನಡೆಸಿ ಮೀನುಗಾರರನ್ನು ರಕ್ಷಿಸುವಂತೆ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ  ಮೀನುಗಾರರ ನಿಯೋಗ ಬೆಂಗಳೂರು ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಕೇಂದ್ರ ರಕ್ಷಣಾ ಸಚಿವ ನಿರ್ಮಲ ಸೀತಾರಾಮ್ ಅವರನ್ನು ಇಂದು ಭೇಟಿಯಾಗಿ ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವೆ ನಿರ್ಮಲ ಸೀತಾರಾಮ್, ಆದಷ್ಟು ಬೇಗ ಮಲ್ಪೆಗೆ ಆಗಮಿಸಿ ಈ ಬಗ್ಗೆ ಸೂಕ್ತ ರೀತಿಯಲ್ಲಿ ಅವಲೋಕನ ನಡೆಸುತ್ತೇನೆ ಎಂದು ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ನಿಯೋಗದಲ್ಲಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಅಖಿಲ ಭಾರತೀಯ ಮೀನುಗಾರರ ವೇದಿಕೆಯ ಪದಾಧಿಕಾರಿಗಳಾದ ದಯಾನಂದ ಸುವರ್ಣ,  ಕರುಣಾಕರ ಸಾಲ್ಯಾನ್, ಶಶಿಧರ್ ತಿಂಗಳಾಯ, ಗೋಪಾಲ ಆರ್ ಕೆ, ಹರೀಶ್ ಕುಂದರ್ ಹಾಗೂ ನಾಪತ್ತೆಯಾದ ಮೀನುಗಾರರ ಕುಟುಂಬ ಸದಸ್ಯರಾದ ಗಣೇಶ್ ಕೋಟ್ಯಾನ್, ಪ್ರಮೋದ್ ಸಾಲ್ಯಾನ್, ಪಾಂಡು ಮೊಗೇರ ಮೊದಲಾದವರು ಹಾಜರಿದ್ದರು.