ನಮ್ಮ ನಾಡ ಸಂಸ್ಥೆ(ರಿ) ಬ್ರಹ್ಮಾವರ ವತಿಯಿಂದ ಆತ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಐ ಡಿ ಕಾರ್ಡ್’ಗಳ ವಿತರಣೆ

ಉಡುಪಿ: ನಮ್ಮ ನಾಡ ಸಂಸ್ಥೆ(ರಿ ) ಬ್ರಹ್ಮಾವರ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಇಲ್ಲಿಯ ಎಲ್ಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಐ ಡಿ ಕಾರ್ಡ್’ಗಳನ್ನು ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ಸಬೀನಾ ರವರು ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತ್ಯಾನಂದ ನಾಯಕ್ ಆತ್ರಾಡಿ ಇವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡುತ್ತ ಶಾಲೆಗೆ ನಮ್ಮ ನಾಡ ಸಂಸ್ಥೆಯು ಶಾಲೆಗೆ ನೀಡಿದ ಕೊಡುಗೆ ಮತ್ತು ಊರವರ ಸಹಕಾರವನ್ನು ಸ್ಮರಿಸಿದರು ಮತ್ತು ಶಾಲೆಯ ಕೆಲ ಅಗತ್ಯತೆಗಳ ಮಾಹಿತಿಯನ್ನು ನೀಡಿದರು.

ನಮ್ಮ ನಾಡ ಸಂಸ್ಥೆಯ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಶಾಕಿರ್ ಎಮ್ ಹಾವಂಜೆಯವರು ಮಾತನಾಡುತ್ತ ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಪರ್ಧಾತ್ಮಕ ಸಮಯದಲ್ಲಿ ಮತ್ತು ಜಿಲ್ಲೆಯಲ್ಲಿ ಹಲವು ಸರಕಾರಿ ಶಾಲೆಗಳು ಮುಚ್ಚುಗಡೆಯಾಗುತ್ತಿರುವ ಈ ಹಂತದಲ್ಲಿ ಅತ್ರಾಡಿಯ ಸರಕಾರಿ ಶಾಲೆಯು ಖಾಸಗಿ ಶಾಲೆಗಳಿಗೆ ಕಡಮೆ ಇಲ್ಲದಂತೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಶ್ಲಾಘನೀಯವಾಗಿದೆ.

ನಮ್ಮ ಸಂಸ್ಥೆಯು ಈಗಾಗಲೇ ನೋಟ್ ಬುಕ್ ಗಳನ್ನು ಕೊಡುಗೆಯಾಗಿ ನೀಡಿದ್ದೇವೆ. ಇವತ್ತು ಮಕ್ಕಳಿಗೆ ಐ ಡಿ ಯ ಕೊರಳ ಪಟ್ಟಿಯನ್ನು ನೀಡುತ್ತಾ ಇದ್ದೇವೆ. ಶಾಲೆಯ ಶಿಕ್ಷಕರು ಉತ್ತಮ ಸೇವೆ ಯನ್ನು ನೀಡುತ್ತಾ ಬಂದಿದ್ದಾರೆ.

ಮುಂದಿನ ದಿನಗಳಲ್ಲಿ ಆತ್ರಾಡಿ ಶಾಲೆಯು ಜಿಲ್ಲೆಯ ಮಾದರಿ ಶಾಲೆಗಳಲ್ಲಿ ಒಂದು ಎಂಬ ಹೆಸರು ಬರಲಿ ಎಂದು ಆಶಿಸಿದರು. ವೇದಿಕೆಯಲ್ಲಿ ನಮ್ಮ ನಾಡ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ನಕ್ವಾ ಯಾಹಿಯ ಮಲ್ಪೆ, ಜಿಲ್ಲಾ ಸಮಿತಿಯ ಸದಸ್ಯರಾದ ಹಾರುನ್ ರಶೀದ್ ಸಾಹೇಬ್, ಹರೀಶ್ ಹೆಗ್ಡೆ, ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ, ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ನಾಯಕ್, ಇರ್ಫಾನ್, ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಶಬನಾ ಪರ್ವೀನ್, ಶ್ರೀಮತಿ ಸುಹಾಸಿನಿ, ಶ್ರೀಮತಿ ವಿಮಲಾ, ಶ್ರೀಮತಿ ಶಾರದಾ ಮುಂತಾದವರು ಉಪಸ್ಥಿತರಿದ್ದರು.