ಉಡುಪಿ: ಹಿರಿಯಡಕದಲ್ಲಿರುವ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವಾಲಯದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಮುಷ್ಠಿ ಕಾಣಿಕೆಯು ನೆರವೇರಿತು. ಇದರ ಅಂಗವಾಗಿ ಪುತ್ತಿಗೆ ಮಠದ ಉಭಯ ಶ್ರೀಪಾದರನ್ನು ಭವ್ಯ ಮೆರವಣಿಗೆಯ ಮೂಲಕ ಪುತ್ತಿಗೆ ಮೂಲ ಮಠದಿಂದ ದೇವಾಲಯಕ್ಕೆ ಕರೆತಂದು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.
ನಂತರ ಸಾಮೂಹಿಕ ಪ್ರಾರ್ಥನೆ, ಗಣಹೋಮವನ್ನು ಮಾಡಲಾಯಿತು. ನಂತರ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಸುಶೀಂದ್ರತೀರ್ಥ ಶ್ರೀಪಾದರು ಮುಷ್ಠಿ ಕಾಣಿಕೆಯನ್ನು ಸಮರ್ಪಿಸುವುದರ ಮೂಲಕ ಮುಷ್ಠಿ ಕಾಣಿಕೆ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ನಂತರ ಅಧಿಕ ಸಂಖ್ಯೆಯಲ್ಲಿ ಭಕ್ತರು ಮುಷ್ಠಿ ಕಾಣಿಕೆಯನ್ನು ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಭಕ್ತ ವೃಂದದಿಂದ ಚತುರ್ಥ ಪರ್ಯಾಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಅಭಿನಂದನಾ ಸಮಾರಂಭದಲ್ಲಿ ಗೌರವವನ್ನು ಸಲ್ಲಿಸಿದರು
















