ಬಾಬರಿ ನಂತರ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಮುಸ್ಲಿಮರು ತಯಾರಿಲ್ಲ: ಅಸಾದುದ್ದೀನ್ ಓವೈಸಿ

ವಾರಣಾಸಿ: ಬಾಬರಿ ಮಸೀದಿಯ ನಂತರ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಮುಸ್ಲಿಮರು ತಯಾರಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ. ನ್ಯಾಯಾಲಯದ ಆದೇಶದನ್ವಯ ವಾರಣಾಸಿಯ ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾಗಿರುವ ಬಳಿಕ ಅವರು ಪ್ರತಿಕ್ರಿಯಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸ ಮತ್ತು 1949 ರಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಾಣಿಸಿಕೊಂಡಾಗ ನಡೆದ ಘಟನೆಯನ್ನು ಉಲ್ಲೇಖಿಸಿದ ಓವೈಸಿ, ವಾರಣಾಸಿಯಲ್ಲಿ ಅದನ್ನು ಪುನರಾವರ್ತಿಸಲು ಬಿಡುವುದಿಲ್ಲ ಎಂದು ಮುಸ್ಲಿಮರು ಪ್ರತಿಜ್ಞೆ ಮಾಡಬೇಕೆಂದಿದ್ದಾರೆ.

ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಓವೈಸಿ, ಬಾಬರಿ ಮಸೀದಿಯ ನಂತರ ಮುಸ್ಲಿಮರು ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಹಿಂದೂ ಪರ ವಾದಿಗಳು ಜ್ಞಾನವಾಪಿಯ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಮಾಡಿರುವ ಪ್ರತಿಪಾದನೆಯನ್ನು ಅಲ್ಲಗಳೆಯುತ್ತಾ ಅದು ಶಿವಲಿಂಗ ಅಲ್ಲ, ನೀರಿನ ಕಾರಂಜಿ ಎಂದಿದ್ದಾರೆ.

“ನಾನು 19-20 ವರ್ಷದವನಿದ್ದಾಗ, ಬಾಬರಿ ಮಸೀದಿಯನ್ನು ನಮ್ಮಿಂದ ಕಿತ್ತುಕೊಳ್ಳಲಾಯಿತು, ಮತ್ತು ಇನ್ಶಾ ಅಲ್ಲಾ, ನಾವು ಈ ವಯಸ್ಸಿನ ಮಕ್ಕಳೊಂದಿಗೆ ಮತ್ತೆ ಹೀಗಾಗಲು ಬಿಡುವುದಿಲ್ಲ” ಎಂದಿರುವ ಓವೈಸಿ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಬಿಡುವುದಿಲ್ಲ ಎಂದು ಸಮುದಾಯದವರು ಪ್ರತಿಜ್ಞೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

“ಮಸೀದಿ ಅಸ್ತಿತ್ವದಲ್ಲಿದೆ ಮತ್ತು ಇನ್ಶಾ ಅಲ್ಲಾಹ್ ಅದು ತೀರ್ಪಿನ ದಿನದವರೆಗೆ ಇರುತ್ತದೆ. ಜ್ಞಾನವಾಪಿ ಮಸೀದಿ ಅಸ್ತಿತ್ವದಲ್ಲಿತ್ತು ಮತ್ತು ಅಲ್ಲಾ ಜಗತ್ತನ್ನು ಅಖಂಡವಾಗಿ ಇಡುವವರೆಗೂ ಮಸೀದಿ ಉಳಿಯುತ್ತದೆ, ” ಎಂದಿದ್ದಾರೆ.

source: Deccan Herald