ಸಿಂಗಲ್ ಲೇಔಟ್ ಸಮಸ್ಯೆ: ಕೋರ್ಟ್ ಆದೇಶಕ್ಕನುಗುಣವಾಗಿ ಖಾತಾ ನೀಡುವಂತೆ ಪುರಸಭಾ ಸದಸ್ಯ ಶುಭದಾರಾವ್ ಆಗ್ರಹ

ಕಾರ್ಕಳ: ಕಳೆದ ಹಲವು ವರ್ಷಗಳಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಿಂಗಲ್ ಲೇಔಟ್ ಸಮಸ್ಯೆಯಿಂದ ಜಮೀನು ಖರೀದಿ, ಮಾರಾಟ ಮತ್ತು ಮನೆ ನಿರ್ಮಾಣ ಅಸಾಧ್ಯವಾಗಿದ್ದು ನೂರಾರು ಕುಟುಂಬಗಳು ಆತಂಕದಲ್ಲಿದ್ದವು, ಸಮಸ್ಯೆಗೆ ಸ್ಪಂದಿಸಬೇಕಾದ ಸರಕಾರ ಮತ್ತು ಜನಪ್ರತಿನಿದಿಗಳು ನಿರ್ಲಕ್ಷವಹಿಸಿದ್ದ ಕಾರಣ ಪರಿಹಾರ ಸಾಧ್ಯವಾಗಿರಲಿಲ್ಲ. ಆದರೀಗ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಜನರಲ್ಲಿ ಭರವಸೆಯನ್ನು ಮೂಡಿಸಿದೆ. ಈ‌ ಆದೇಶವನ್ನೇ ಮಾದರಿಯಾಗಿ ಎಲ್ಲಾ ಅರ್ಜಿದಾರರಿಗೂ ಖಾತಾ ನೀಡುವಂತೆ ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.

ನಗರದಲ್ಲಿ ಶನಿವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳದ ವಕೀಲರೊಬ್ಬರು ತಮ್ಮದೇ ಜಮೀನಿಗೆ ಸಂಬಂಧಿಸಿದಂತೆ ಖಾತಾ (ನಮೂನೆ-3) ಸಮಸ್ಯೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಶನ್ (1921/2022) ದಾಖಲಿಸಿದ್ದು, ಸದ್ರಿ ಪ್ರಕರಣದಲ್ಲಿ 8 ವಾರದ ಒಳಗಾಗಿ ಖಾತಾ ನೀಡಬೇಕೆಂದು ದಿನಾಂಕ 3:09:2022 ರಂದು‌ ಆದೇಶವಾಗಿದೆ. ಈ ಆದೇಶದಂತೆ ಖಾತಾ ನೀಡುವಂತೆ ಅವರು ಪುರಸಭೆಗೆ ಮನವಿಯನ್ನು ಸಲ್ಲಿಸಿದ್ದಾರೆ. ಇದು ಆತಂಕದಲ್ಲಿದ್ದ ಜನರಲ್ಲಿ‌ ಭರವಸೆಯನ್ನು ಮೂಡಿಸಿದೆ ಎಂದರು.

ಸರಕಾರ ಮತ್ತು ಜನಪ್ರತಿನಿಧಿಗಳು ಪರಿಹರಿಸಬೇಕಿದ್ದ ಸಮಸ್ಯೆಯೊಂದಕ್ಕೆ ವಕೀಲರ ಪ್ರಯತ್ನದಿಂದ ಪರಿಹಾರ ಸಿಕ್ಕಿದ್ದು, ಅವರನ್ನು ಜನತೆಯ ಪರವಾಗಿ ಅಭಿನಂದಿಸುತ್ತೇನೆ. ಖಾತಾ ಸಮಸ್ಯೆಗೆ ನಾನಾ ಕಾರಣ ಕೊಡುತ್ತಿದ್ದ ಸಚಿವ ಸುನೀಲ್ ಕುಮಾರ್ ರವರು ಇದಕ್ಕೆ ಉತ್ತರಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಕಳೆದ ವರ್ಷ ಇಂಜಿನಿಯರ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಿಂಗಲ್ ಲೇಔಟ್ ಸಮಸ್ಯೆಗೆ ತಿಂಗಳೊಳಗೆ ಪರಿಹಾರ ಎಂದು ಅವರು ನೀಡಿದ ಹೇಳಿಕೆಗೆ ಒಂದು‌ ವರ್ಷವಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿ ಇದಿದ್ದರೆ ತಮ್ಮದೇ ಸರ್ಕಾರದ ಅವಧಿಯಲ್ಲಿ ಪ್ರಯತ್ನಿಸಿ ಪರಿಹಾರ ಕಂಡುಕೊಳ್ಳಬಹುದಿತ್ತು ಎಂದರು.

ಈಗಾಗಲೆ ವಿದಾನಸಭೆಯ ಅಧಿವೇಶನದಲ್ಲಿ ಹೊಸ ಕಾನೂನು ರೂಪಿಸಲು ಅನುಮೋದನೆ ದೊರಕ್ಕಿದ್ದು, ಅದನ್ನು ಶೀಘ್ರ ಜಾರಿಗೊಳಿಸಿ ಶಾಶ್ವತ ಪರಿಹಾರ ಸಿಗುವುವಂತೆ ಪ್ರಯತ್ನಿಸಿ ಎಂದು ಅವರು ಆಗ್ರಹಿಸಿದ್ದಾರೆ.