ಸೌತ್ ಕೆನರಾ ಫೋಟೋಗ್ರಾಫ‌ರ್ಸ್ ಅಸೋಸಿಯೇಶನ್ ವತಿಯಿಂದ ಕೆಸರು ಗದ್ದೆ ಕ್ರೀಡಾಕೂಟ

ಉಡುಪಿ: ಸೌತ್ ಕೆನರಾ ಫೋಟೋಗ್ರಾಫ‌ರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಹಾಗೂ ಉಡುಪಿ ವಲಯದ ಅತಿಥ್ಯದಲ್ಲಿ 14 ವಲಯಗಳ ಎಸ್ ಕೆಪಿಎ ಸದಸ್ಯರ ಜಿಲ್ಲಾಮಟ್ಟದ ಕೆಸರು ಗದ್ದೆ ಕ್ರೀಡಾಕೂಟವು ಕಟಪಾಡಿ ಬೀಡು ಕಂಬಳ ಗದ್ದೆಯ ಸಮೀಪದಲ್ಲಿ ಭಾನುವಾರ ನಡೆಯಿತು.

ಉಡುಪಿ ಶಾಸಕ ಯಶ್ ಪಾಲ್ ಎ. ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಛಾಯಾಗ್ರಾಹಕರನ್ನು ಮೀರಿಸುವ ವ್ಯಕ್ತಿ ಇಲ್ಲ. ದೇಶದಲ್ಲಿ ಅತೀ ಹೆಚ್ಚು ಭವಿಷ್ಯ ಇರುವ ವೃತ್ತಿ ನಿರತರು ಛಾಯಾಗ್ರಾಹಕರಾಗಿದ್ದಾರೆ. ಪ್ರಸ್ತುತ ಸರಕಾರವನ್ನು ಗುರುತಿಸಿ, ಎಚ್ಚರಿಸುವಂತಹ ಕೆಲಸ ಮಾಡುತ್ತಿರುವ ಛಾಯಾಗ್ರಾಹಕರನ್ನು ಸರಕಾರ ಗುರುತಿಸುತ್ತಿಲ್ಲ ಎಂಬ ಕೂಗು ಕೇಳುತ್ತಿದೆ. ಛಾಯಾಗ್ರಾಹಕರಿಗೂ ಸೂಕ್ತ ಸ್ಥಾನಮಾನ ದೊರೆಯಬೇಕಿದೆ ಎಂದರು.

ಸಭಾಧ್ಯಕ್ಷತೆಯನ್ನು ಎಸ್ ಕೆ ಪಿಎ ಉಡುಪಿ ಜಿಲ್ಲಾಧ್ಯಕ್ಷ ಆನಂದ ಎನ್ ಕುಂಪಲ ವಹಿಸಿದ್ದರು.

ಮುಖ್ಯ ಅತಿಥಿ ಕಟಪಾಡಿಬೀಡು ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಡಿಜಿಟಲ್ ಕ್ರಾಂತಿಯಿಂದಾಗಿ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಛಾಯಾಗ್ರಾಹಕರು ನಮ್ಮ ನೆನಪುಗಳನ್ನು ಜೀವಂತವಾಗಿಸುವ ವ್ಯಕ್ತಿಗಳಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಧಾವಂತದಿಂದಾಗಿ ಛಾಯಾಗ್ರಾಹಕರು ಪ್ರತಿನಿತ್ಯ ಅಪ್ ಡೇಟ್ ಆಗಬೇಕಿದೆ ಎಂದರು.

ಸಮಾಜ ಸೇವಕ ವಿಶ್ವನಾಥ ಶೆಣೈ ಉಡುಪಿ, ಅಶ್ವಿನ್ ಬಲ್ಲಾಳ್, ಶ್ರೀನಿವಾಸ್ ಬಲ್ಲಾಳ್ , ವಿನಯ ಬಲ್ಲಾಳ್‌,ಸುಭಾಸ್ ಬಲ್ಲಾಳ್, ನವೀನ್ ಬಲ್ಲಾಳ್, ಲಯನ್ಸ್ ಜಿಲ್ಲಾ ರೀಜನಲ್ ಚೇರ್ಮನ್ ವಿ. ಪ್ರಸಾದ್‌ ಶೆಟ್ಟಿ, ಕೆ. ವಾಸುದೇವ ರಾವ್, ಎಸ್.ಕೆ.ಪಿ.ಎ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕುದ್ರೋಳಿ, ಎಸ್ ಕೆಪಿಎ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ,ಕೋಶಾಧಿಕಾರಿ ನವೀನ್ ರೈ ಪಂಜಳ, ರಾಜೇಶ್ ತೊಕ್ಕೊಟ್ಟು ಉಪಸ್ಥಿತರಿದ್ದರು.

ಎಸ್ ಕೆಪಿಎ ಉಡುಪಿ ವಲಯದ ಅಧ್ಯಕ್ಷ ಜನಾರ್ಧನ ಕೊಡವೂರು ಸ್ವಾಗತಿಸಿದರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು.
ಕ್ರೀಡಾ ಕಾರ್ಯದರ್ಶಿ ಶ್ರೀನಿವಾಸ ಐತಾಳ್ ಕಾಪು ವಂದಿಸಿದರು.