ಭುವನೇಶ್ವರ: ರಾಜ್ಯದ ಹಲವು ಪ್ರದೇಶಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ ಶೋಧ ನಡೆಸಿದ್ದಾರೆ.ಒಡಿಶಾದಲ್ಲಿ ಆದಾಯ ತೆರಿಗೆ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ತೆರಿಗೆ ವಂಚಿಸಿದ ಆರೋಪದ ಮೇಲೆ ಎರಡು ಮದ್ಯ ತಯಾರಿಕೆ ಮತ್ತು ಮಾರಾಟ ಕಂಪನಿಗಳ ಮೇಲೆ ದಾಳಿ ಮಾಡಿ 300 ಕೋಟಿಗೂ ಅಧಿಕ ನಗದು ವಶಪಡಿಸಿಕೊಂಡಿದೆ.ಒಡಿಶಾದ ಮದ್ಯ ತಯಾರಿಕಾ ಕಂಪನಿ ಮೇಲೆ ನಡೆದ ಐಟಿ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ.
ಆಪಾದಿತ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಕಂಪನಿಗೆ ಸಂಬಂಧಿಸಿದ ಕನಿಷ್ಠ 5 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಂಪನಿಯ ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರ ನಿವಾಸಗಳಲ್ಲೂ ಐಟಿ ತಂಡಗಳು ಶೋಧ ನಡೆಸಿವೆ. ಐಟಿ ದಾಳಿಗಳು ಇನ್ನೂ ಮುಂದುವರೆದಿದ್ದು, ಸಂಪೂರ್ಣ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ಫಲಿತಾಂಶ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.ಮದ್ಯ ತಯಾರಿಕಾ ಕಂಪನಿಗೆ ಸಂಬಂಧಿಸಿದ ಬೌಧ್, ಬಲಂಗೀರ್, ರಾಯಗಡ ಮತ್ತು ಸಂಬಲ್ಪುರದಲ್ಲಿನ ತಾಣಗಳ ಮೇಲೆ ದಾಳಿಗಳನ್ನು ನಡೆಸಲಾಯಿತು. ಕೋಲ್ಕತ್ತಾ ಮತ್ತು ರಾಂಚಿಯಲ್ಲಿರುವ ಸಂಸ್ಥೆಯ ನೋಂದಾಯಿತ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಯ ಕಚೇರಿಗಳ ಶೋಧ: ಕಂಪನಿಯ ಕಾರ್ಖಾನೆ ಮತ್ತು ಕಚೇರಿ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಟಕ್ನ ಉದ್ಯಮಿ ಅಶೋಕ್ ಕುಮಾರ್ ಅಗರ್ವಾಲ್ ಅವರ ರೈಸ್ ಮಿಲ್, ನಿವಾಸ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ತಂಡ ಶೋಧ ನಡೆಸಿದೆ. ಇವರಿಗೆ ಕಂಪನಿಯೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಲಾಗಿದೆ. ಮತ್ತೊಂದೆಡೆ, ಬಲಂಗೀರ್ ಮತ್ತು ತಿತಿಲಗಢದಲ್ಲಿ ಮದ್ಯದ ವ್ಯಾಪಾರಿಗಳು ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ. ಆದಾಯ ತೆರಿಗೆ ಇಲಾಖೆಯ 30 ಸದಸ್ಯರ ತಂಡವು ವೈನ್ ವ್ಯಾಪಾರಿಗಳಾದ ಸಂಜಯ್ ಸಾಹು ಮತ್ತು ದೀಪಕ್ ಸಾಹು ಅವರ ಮನೆ ಮತ್ತು ಮದ್ಯದಂಗಡಿ ಮೇಲೆ ದಾಳಿ ನಡೆಸಿತು.
ಬಳಿಕ ಐಟಿ ತಂಡ ಕೋಲ್ಕತ್ತಾ ಮತ್ತು ರಾಂಚಿಯ ಕೆಲವೆಡೆ ತಪಾಸಣೆ ನಡೆಸಿದೆ. ಕಂಪನಿಯ ಹಲವಾರು ನಿರ್ದೇಶಕರು ಮತ್ತು ಎಂಡಿಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿಗೆ ಸಂಬಂಧಿಸಿದಂತೆ ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಅಥವಾ ಇತರ ಪಾಲುದಾರ ಕಂಪನಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಕಚೇರಿಯೊಂದರಲ್ಲಿ 150 ಕೋಟಿ ಪತ್ತೆ: ಪಶ್ಚಿಮ ಒಡಿಶಾದ ಅತಿದೊಡ್ಡ ಸ್ಥಳೀಯ ಮದ್ಯ ತಯಾರಿಕೆ ಮತ್ತು ಮಾರಾಟ ಕಂಪನಿಗಳಲ್ಲಿ ಒಂದಾದ ಬಲದೇವ್ ಸಾಹು ಮತ್ತು ಗ್ರೂಪ್ ಆಫ್ ಕಂಪನಿಗೆ ಸೇರಿದ ಕಚೇರಿ ಒಂದರಲ್ಲೇ 150 ಕೋಟಿಗೂ ಹೆಚ್ಚು ಹಣ ಪತ್ತೆ ಮಾಡಲಾಗಿದೆ. ಇಷ್ಟು ಹಣ ಕಂಡು ಅಧಿಕಾರಿಗಳೇ ಅಚ್ಚರಿಗೆ ಒಳಗಾಗಿದ್ದಾರೆ. ನಗದನ್ನು ಸದ್ಯ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.