ಉಡುಪಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ವಾರಾಹಿ ಯೋಜನೆ ಕಾಮಗಾರಿ ಫೆಬ್ರವರಿಯೊಳಗೆ ಪೂರ್ಣಗೊಳಿಸಲು ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರದಂದು ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿಳಂಬಗತಿಯ ಕಾಮಗಾರಿ ಸಹಿಸುವುದಿಲ್ಲ, ಕಾಮಗಾರಿ ಮುಗಿಸಿ ನೀರು ಪೂರೈಸಬೇಕು ಎಂದು ತಾಕೀತು ಮಾಡಿದರು.
ಕೆಯುಡಿಐಎಫ್ಸಿ ಎಇಇ ಅರಕೇಶ್ ಮಾಹಿತಿನೀಡಿ, ಪ್ರಸ್ತುತ ಒಟ್ಟು 38 ಕಿ. ಮೀ. ಮುಖ್ಯ ಪೈಪ್ಲೈನ್ ಸಂಪರ್ಕದಲ್ಲಿ 31 ಕಿ. ಮೀ. ಪೈಪ್ಲೈನ್ ಪೂರ್ಣಗೊಳಿಸಲಾಗಿದೆ. ಹಾಲಾಡಿ ಮತ್ತು ಭರತ್ಕಲ್ ಡಬ್ಲೂಟಿಪಿ ಪ್ಲಾಂಟ್ವರೆಗೆ 7 ಕಿ. ಮೀ. ಪೈಪ್ ಲೈನ್ ಹಾಕಲು ಸ್ಥಳಿಯರು ಮತ್ತು ಅರಣ್ಯ ಇಲಾಖೆಯಿಂದ ಸಮಸ್ಯೆಯಾಗಿದೆ. ಅರಣ್ಯ ಇಲಾಖೆ ಸಂಬಂಧಿಸಿದ ಪ್ರಕ್ರಿಯೆ ಅಂತಿಮದಲ್ಲಿದ್ದು, ಇದಕ್ಕೆ ಪರಿಹಾರ ಸಿಗಲಿದೆ. ಉಡುಪಿಗೆ ಹಾದು ಬರುವ ಮುಖ್ಯ ಪೈಪ್ಲೈನ್ಗೆ 5 ಸೇತುವೆ ನಿರ್ಮಾಣವಾಗಬೇಕು. ಇದರಲ್ಲಿ 2 ಪೂರ್ಣಗೊಂಡಿದ್ದು, ಒಂದು ಸೇತುವೆ ಕೆಲಸ ಪ್ರಗತಿಯಲ್ಲಿದೆ. ತಾತ್ಕಾಲಿಕ ಪೈಪ್ಲೈನ್ ನಿರ್ಮಿಸಿ ನಗರಕ್ಕೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ವತಿಯಿಂದ ಸರಳೇಬೆಟ್ಟುವಿನಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯದ ಮನೆಗಳನ್ನು ಡಿ.1ರೊಳಗೆ ಫಲಾನುಭವಿಗಳಿಗೆ ಹಸ್ತಾಂತರಿಸಲು ಶಾಸಕ ಯಶ್ಪಾಲ್ ಸುವರ್ಣ ಸೂಚಿಸಿದರು. ವಿದ್ಯುತ್ ಸಂಬಂಧಿತ ಕಾಮಗಾರಿ ಪೂರ್ಣಗೊಂಡ ತಕ್ಷಣ ಮನೆ ಹಸ್ತಾಂತರಿಸಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಿಳಿಸಿದರು. ವಸತಿ ಸಮುಚ್ಛಯಕ್ಕೆ ಸಂಬಂಧಿಸಿದ ಕಂಪ್ಲೀಶನ್ ರಿಪೋರ್ಟ್ ನೀಡಿದ ಕೂಡಲೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಮಣಿಪಾಲ, ಉಡುಪಿ ಪೇಟೆಯಲ್ಲಿ ಪಾರ್ಕಿಂಗ್ ಮತ್ತು ಟ್ರಾಫಿಕ್ ದಟ್ಟಣೆ ಸಮಸ್ಯೆ ತೀವ್ರವಾಗಿದ್ದು, ಅಡ್ಡಾದಿಡ್ಡಿ ಪಾರ್ಕಿಂಗ್, ಏಕಮುಖ ಸಂಚಾರದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಗರದಲ್ಲಿ ಸುಗಮ ಸಂಚಾರಕ್ಕೆ ಕ್ರಮವಹಿಸಬೇಕು ಎಂದು ಸಂಚಾರ ಪೊಲೀಸರಿಗೆ ಸೂಚಿಸಿದರು.
ನಗರಸಭೆ ಕಚೇರಿಯಲ್ಲಿ ಕಾಲ್ಸೆಂಟರ್ ರೂಪಿಸಿ ಎಲ್ಲ ದೂರುಗಳನ್ನು ದಾಖಲೀಕರಣ ಮಾಡಿಕೊಂಡು ವಾರದ ಒಳಗೆ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ರಾಯಪ್ಪ ಉಪಸ್ಥಿತರಿದ್ದರು.