ಉಡುಪಿ: ಇತ್ತೀಚೆಗಷ್ಟೇ ಕರಾವಳಿಯ ಅತ್ಯಂತ ಹಿಂದುಳಿದ ಸಮುದಾಯವಾದ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿ, ಕೊರಗ ಬಂಧುಗಳೊಂದಿಗೆ ಊಟೋಪಚಾರ, ಸಂವಾದ ನಡೆಸಿ ಸುದ್ದಿಯಾಗಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಇದೀಗ ಎಸ್ಸಿ ಕಾಲನಿಯಲ್ಲಿ ಸಹಭೋಜನ ನಡೆಸಿದ್ದಾರೆ.
ಹಟ್ಟಿಯಂಗಡಿ ಗ್ರಾಮದ ಕನ್ಯಾನ ಗುಡ್ಡೆ ಅಂಗಡಿ ಪ್ರದೇಶದ ಎಸ್ಸಿ ಕಾಲೋನಿ ಶಶಿಕುಮಾರ್ ಅವರ ಮನೆಗೆ ಭೇಟಿ ನೀಡಿ, ದಂಪತಿಗಳ ಪಾದಪೂಜೆ ನೆರವೇರಿಸಿ ಸಹಭೋಜನದಲ್ಲಿ ಭಾಗಿಯಾದರು.
ಗಂಟಿಹೊಳೆ ಅವರ ಈ ನಡೆಯ ಬಗ್ಗೆ, ಪರಿಶಿಷ್ಟ ಕಾಲನಿಯ ಬಂಧುಗಳು ಸಂತಸ ವ್ಯಕ್ತಪಡಿಸಿದ್ದು “ಶಾಸಕರ ಈ ಕಾರ್ಯ ಸಮಾಜದಲ್ಲಿ ಜಾತಿ ತಾರತಮ್ಯ, ಅಶ್ಪೃಶ್ಯತೆಯ ಮನೋಭಾವನೆಯನ್ನು ತೊಡೆದುಹಾಕಲಿದೆ” ಎಂದು ಹೇಳಿದ್ದಾರೆ. ಸಮಾಜದಲ್ಲಿ ತಾರತಮ್ಯ ಹೋಗಬೇಕು ಎಂಬ ಕಾರಣಕ್ಕೆ ಈ ಹೊಸ ಪ್ರಯೋಗಗಳಿಗೆ ಶಾಸಕರು ಮುಂದಾಗಿದ್ದಾರೆ.
















