ಕಾರ್ಕಳ: ಡಿ. 29 ರಂದು ಬಜಗೋಳಿಯಲ್ಲಿ ಔಷಧಿ ಸಸ್ಯಗಳ ಕ್ಷೇತ್ರೋತ್ಸವ

ಕಾರ್ಕಳ: ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಕಾಂಪ್ಕೋ ಮಂಗಳೂರು ಇವರ ಸಹಯೋಗದಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿ ಪ್ರಾಯೋಜಿತ ಯೋಜನೆ ಅಡಿಯಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಔಷಧಿ ಸಸ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 29 ರಂದು ಕಾರ್ಕಳ ತಾಲೂಕು ಬಜಗೋಳಿಯ ತ್ರಿಭುವನ ಮಾಳ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಔಷಧಿ ಸಸ್ಯಗಳ ಕೃಷಿಯ ಅವಶ್ಯಕತೆ ಮತ್ತು ಪ್ರಾಮುಖ್ಯತೆ, ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಅಂತರ ಬೆಳೆಯಾಗಿ ಬೆಳೆಯಲು ಸೂಕ್ತವಾದ ಔಷಧಿ ಸಸ್ಯಗಳ ವಸ್ತುಚಿತ್ರಣ, ಔಷಧಿ ಸಸ್ಯಗಳ ಕೃಷಿಗೆ ಸಂಬಂಧಿಸಿದ ಯಶಸ್ವಿ ಕೃಷಿ ಪದ್ಧತಿ/ತಂತ್ರಜ್ಞಾನದ ಪ್ರಾಯೋಗಿಕ ಮಾಹಿತಿ ನೀಡುವುದು, ಔಷಧಿ ಸಸ್ಯಗಳ ಉತ್ತಮ ಕೃಷಿ ಹಾಗೂ ಕಟಾವು ಪದ್ದತಿ, ಪ್ರಾಥಮಿಕ ಸಂಸ್ಕರಣೆ ಇತ್ಯಾದಿ ಕುರಿತ ಪ್ರಾಯೋಗಿಕ ಮಾಹಿತಿ ಮತ್ತು ಔಷಧಿ ಸಸ್ಯಗಳ ವ್ಯವಹಾರ ಮತು ಮಾರುಕಟ್ಟೆಯ ಕುರಿತು ಮಾಹಿತಿ ನೀಡಲಾಗುವುದು.

ಜಿಲ್ಲೆಯ ಕೃಷಿಕರು, ಆಯುರ್ವೇದ ವೈದ್ಯರು, ಅರಣ್ಯ ಇಲಾಖೆ, ತೋಟಗಾರಿಕ ಇಲಾಖೆ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಹಾಗೂ ತೋಟಗಾರಿಕ ಸಂಶೋಧನಾ ಕೇಂದ್ರಗಳು, ಆಯುರ್ವೇದ ಕಾಲೇಜುಗಳು, ಪಾರಂಪರಿಕ ವೈದ್ಯರುಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.