ದೆಹಲಿ ಪೇಜಾವರ ಮಠದಲ್ಲಿ 17 ಬಾಲಕರಿಗೆ ಸಾಮೂಹಿಕ ಬ್ರಹ್ಮೋಪದೇಶ; ಪೇಜಾವರ ಶ್ರೀ ಭಾಗಿ

ನವದೆಹಲಿಯ ವಸಂತ್ ಕುಂಜ್ ನಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಥಾಪಿಸಿದ ಉಡುಪಿ ಶ್ರೀ ಕೃಷ್ಣ ಧಾಮದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮವು ಅತ್ಯಂತ ವೈಭವದಿಂದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನೆರವೇರಿತು.

ಉತ್ತರ ಭಾರತದಲ್ಲಿ ತತ್ವಜ್ಞಾನ ಪ್ರಸಾರಕ್ಕಾಗಿ ಸ್ಥಾಪಿತವಾದ ಗುರುಕುಲದಲ್ಲಿ ಸುಮಾರು 40ಕ್ಕೂ ಅಧಿಕ ವಿಪ್ರ ಬಾಲಕರುಗಳು ಕಳೆದ ಮೂರು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದು, ಹಲವು ಅಧ್ಯಾಪಕರು ಅಧ್ಯಾಪನವನ್ನು ನಡೆಸುತ್ತಿದ್ದಾರೆ.

ಈ ಧಾರ್ಮಿಕ ವಿಧಿಯ ನೇತೃತ್ವವನ್ನು ಶ್ರೀ ಮಠದ ವ್ಯವಸ್ಥಾಪಕರಾದ ವಿದ್ವಾನ್ ದೇವಿಪ್ರಸಾದ ಆಚಾರ್ಯರು ವಹಿಸಿದ್ದರು. ಸ್ಥಳೀಯ ಪುರೋಹಿತರಾದ ವಿದ್ವಾನ್ ರಾಕೇಶ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಅಚ್ಚುಕಟ್ಟಾಗಿ ನೆರವೇರಿತು.

ಇದೇ ಸಂದರ್ಭದಲ್ಲಿ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರುಕುಲದ ಹಾಗೂ ಸಂಶೋಧನಾ ಮಂದಿರದ ನಿದೇಶಕರನ್ನಾಗಿ ಪೂರ್ಣ ಪ್ರಜ್ಞವಿದ್ಯಾಪೀಠದ ವಿದ್ವಾಂಸರಾದ ಡಾ. ವಿಠೋಬಾಚಾರ್ಯ ಅವರನ್ನು ನೇಮಿಸಿ ಆದೇಶಿಸಿದರು.

ಈ ಸಂದರ್ಭದಲ್ಲಿ ಡಾ. ಗುರುರಾಜ ಕಲ್ಕೂರ ಹಾಗೂ ವಿದ್ವಾನ್ ನಿಧಿ ಆಚಾರ್ಯ, ಅಧ್ಯಾಪಕರಾದ ವಿದ್ವಾನ್ ಅನುರಾಗ ಆಚಾರ್ಯ, ಮಠದ ವ್ಯವಸ್ಥಾಪಕ ವಿದ್ವಾನ್ ದೇವೀಪ್ರಸಾದ ಆಚಾರ್ಯ ಮೊದಲಾದವರು ಸಹಕರಿಸಿದರು.

ಇದೇ ವೇಳೆ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಎಲ್ಲ ನೂತನ ವಟುಗಳಿಗೆ ತಪ್ತಮುದ್ರಾಧಾರಣೆ ಹಾಗೂ ಶ್ರೀ ನಾರಾಯಣ ಅಷ್ಟಾಕ್ಷರ ಮಂತ್ರೋಪದೇಶ ನೀಡಿ ಫಲ ಮಂತ್ರಾಕ್ಷತೆ ಸಹಿತ ಅನುಗ್ರಹಿಸಿದರು. ‌